Mysore
20
overcast clouds
Light
Dark

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವೃತ್ತಗಳಿಗೆ ಇಲಿ, ಹೆಗ್ಗಣಗಳ ಕಾಟ

ಮೈಸೂರು: ಪಾರಂಪರಿಕ ನಗರಿ ಎಂದು ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಈಗ ಪ್ರಮುಖ ವೃತ್ತಗಳ ನಿರ್ವಹಣೆ ನಿಂತುಹೋಗಿದೆ. ಈ ಹಿನ್ನೆಲೆಯಲ್ಲಿ ಅವುಗಳು ಇಲಿ, ಹೆಗ್ಗಣಗಳ ಆವಾಸ ಸ್ಥಾನವಾಗಿದ್ದು, ಪ್ರತಿಮೆಗಳ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 200ಕ್ಕೂ ಹೆಚ್ಚು ವೃತ್ತಗಳಿದ್ದು, ನೂರಾರು ಪ್ರತಿಮೆಗಳಿವೆ. ಕುವೆಂಪುನಗರ, ರಾಮಕೃಷ್ಣನಗರ, ಬನ್ನಿಮಂಟಪ, ರಾಮಸ್ವಾಮಿ ಸರ್ಕಲ್‌, ವಿದ್ಯಾರಣ್ಯಪುರಂ, ಮೆಟ್ರೋಪೋಲ್‌ ಸರ್ಕಲ್‌, ಸರಸ್ವತಿಪುರಂ, ನಜರಬಾದ್‌ ಸಹಿತ ಎಲ್ಲಾ ಬಡಾವಣೆಗಳಲ್ಲಿ ಒಂದೊಂದು ವೃತ್ತಗಳಿವೆ.

ಡಾ.ಬಿ.ಆರ್.ಅಂಬೇಡ್ಕರ್‌, ಡಾ.ರಾಜ್‌ ಕುಮಾರ್‌, ಕುವೆಂಪು, ಪರಮಹಂಸ, ವಿವೇಕಾನಂದ, ಬಸವೇಶ್ವರ ಸೇರಿದಂತೆ ಸಾಕಷ್ಟು ಪ್ರತಿಮೆಗಳಿಗೆ. ವೃತ್ತಗಳ ಒಳಭಾಗದಲ್ಲಿ ಗಾರ್ಡನ್‌ಗಳಿದ್ದು, ಅವುಗಳನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಮೊದಲೆಲ್ಲಾ ಇಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಆದರೀಗ ವೃತ್ತಗಳ ಬಗ್ಗೆ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ.

ವೃತ್ತಗಳ ನಿರ್ವಹಣೆಯನ್ನು ಸಂಘ, ಸಂಸ್ಥೆಗಳಿಗೆ ಕೊಟ್ಟರೆ ಸೂಕ್ತ ನಿರ್ವಹಣೆ ಜೊತೆಗೆ ಪ್ರತಿಮೆಗಳ ಸಂರಕ್ಷಣೆಯೂ ಆಗುತ್ತದೆ. ಮೈಸೂರು ನಗರ ಪಾಲಿಕೆ ಅದಕ್ಕೆ ಅವಕಾಶ ನೀಡಬೇಕಿದೆ. ಇವುಗಳ ಜೊತೆಗೆ ಅರಮನೆ ಗೋಪುರ, ಗೇಟುಗಳು, ಕಿಟಕಿಗಳಿಗೆ, ಆರ್ಚ್‌ಗಳಲ್ಲಿಯೂ ಪಾರಿವಾಳಗಳು ಕುಳಿತು ಹಿಕ್ಕೆ ಹಾಕುತ್ತಿವೆ. ಆದ್ದರಿಂದ ದಸರಾ ಸಮಯದಲ್ಲಿ ಮಾತ್ರ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯ ತಿಂಗಳಿಗೊಮ್ಮೆ ಮಾಡಲು ಆರಂಭಿಸಬೇಕು ಎಂದು ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.