ಮೈಸೂರು : ದಸರಾ ಮಹೋತ್ಸದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆ, ಮಾವುತರು ಮತ್ತು ಕಾವಾಡಿ, ಅರಣ್ಯಾಧಿಕಾರಿಗಳಿಗೆ ಜಿಲ್ಲಾಡಳಿತದಿಂದ 2.04 ಕೋಟಿ ರೂ.ಗಳ ವಿಮೆ ಮಾಡಿಸಲಾಗಿದೆ.
ಈ ಬಾರಿ ದಸರೆಯಲ್ಲಿ ಪಾಲ್ಗೊಳ್ಳುವ 14 ಆನೆಗಳು, 14 ಜನ ಮಾವುತರು, 14 ಜನ ಕವಾಡಿಗಳು ಸೇರಿದಂತೆ ಅರಣ್ಯ ಇಲಾಖೆಯ 43 ಸಿಬ್ಬಂದಿಗಳು ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಈ ಪೈಕಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ 50 ಲಕ್ಷ ರೂ. ವಿಮೆ ಸೌಲಭ್ಯವಿದೆ. ಗಜಪಡೆಯ ತಾಲೀಮು ಅಥವಾ ಮೆರವಣಿಗೆಯ ಸಂದರ್ಭ ಏನಾದರೂ ಅನಾಹುತದಿಂದ ಗಾಯಗೊಂಡರೆ, ಇಲ್ಲವೇ ಸಾರ್ವಜನಿಕರಿಗೆ ಹಾನಿ ಉಂಟು ಮಾಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಅನೇಕ ವರ್ಷಗಳಿಂದ ಈ ಕ್ರಮ ಕೈಗೊಳುತ್ತಿದೆ. ಅಂತೆಯೆ, ಈ ಬಾರಿಯೂ ಅದನ್ನು ಮುಂದುವರಿಸಿದೆ.
ವನ್ಯಜೀವಿಗಳ ವಿಷಯವಾಗಿ ದೇಶದಲ್ಲಿ ಕಠಿಣ ಕಾನೂನುಗಳಿವೆ. ಕಾಡಿನಿಂದ ನಾಡಿಗೆ ಪ್ರಾಣಿಗಳನ್ನು ಕರೆತರುವಾಗ ಸೂಕ್ತ ಕ್ರಮ ವಹಿಸಬೇಕು. ಅದರಲ್ಲೂ ಆನೆಗಳನ್ನು ಕರೆತರುವಾಗ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆನೆಗಳಿಗೆ ಅಥವಾ ಸಾರ್ವಜನಿಕರಿಗೆ ಒಂದೊಮ್ಮೆ ಏನಾದರೂ ತೊಂದರೆಯಾದರೆ ಪರಿಹಾರ ನೀಡಲು ಅರಣ್ಯ ಇಲಾಖೆಯಲ್ಲಿ ಅವಕಾಶವಿಲ್ಲ. ಅದಕ್ಕಾಗಿ ಗಜಪಡೆ, ಗಜಸೇವಕರು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಅವರ ಆಸ್ತಿಗೆ ವಿಮೆ ಮಾಡಿಸಲಾಗುತ್ತದೆ. ಈ ವಿಮೆಯ ಹಣವನ್ನು ಜಿಲ್ಲಾಡಳಿತವೇ ಪಾವತಿಸುತ್ತದೆ. ಈ ವಿಮೆ ಜಂಬೂಸವಾರಿ ಮೆರವಣಿಗೆ ಮುಗಿಸಿ ಮತ್ತೆ ಆನೆಗಳು ಕಾಡು ಸೇರುವವರೆಗೂ ಚಾಲ್ತಿಯಲ್ಲಿರಲ್ಲಿದೆ.
ದಸರಾ ಗಜಪಡೆ ಸೋಮವಾರ ಮೈಸೂರಿಗೆ ಆಗಮಿಸಿದ್ದು, ಸೋಮವಾರದಿಂದ ಆರಂಭವಾಗಿರುವ ಈ ಸೌಲಭ್ಯಗಜಪಡೆ ಮೈಸೂರಿನಿಂದ ವಾಪಸ್ಸಾಗುವ ಅ.5 ರವರೆಗೂ ಚಾಲ್ತಿಯಲ್ಲಿರುವಂತೆ ವಿಮೆ ಮಾಡಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ದಿ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕಂಪೆನಿಗೆ 67 ಸಾವಿರ ರೂ. ಪ್ರೀಮಿಯಂ ಪಾವತಿಸಲಾಗಿದೆ.
ಗಜಪಡೆಯ ಪಾಲೆಷ್ಟು?
ಈ ವಿಮೆಯಲ್ಲಿ ಗಜಪಡೆಯ ಪಾಲು 68 ಲಕ್ಷ ರೂ. ಇದೆ. ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲ ಗಂಡಾನೆಗಳಿಗೆ ತಲಾ 5 ಲಕ್ಷ ರೂ. ಸೇರಿದಂತೆ ಒಟ್ಟು 50 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ನಾಲ್ಕು ಹೆಣ್ಣಾನೆಗಳಿಗೆ 18 ಲಕ್ಷ ರೂ. ವಿಮೆ ಮಾಡಿಸಲಾಗಿದೆ.
ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಸಹಾಯಕರು, ಅಧೀಕಾರಿಗಳು ಸೇರಿದಂತೆ ಒಟ್ಟು 43 ಜನರಿಗೆ 86 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ, ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ದಸರಾ ಆನೆಗಳಿಂದ ನಷ್ಟವಾದರೂ ವಿಮೆ ಸೌಲಭ್ಯ ದೊರೆಯಲಿದೆ. ಇದಕ್ಕೆ 50 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಗಜ ಸೇವಕರಿಗೆ ತಲಾ 2 ಲಕ್ಷ ರೂ. ವಿಮೆ ಜೊತೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ಸಹಾಯಕರುಗಳಿಗೂ ತಲಾ 2 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗಿದೆ.





