ಮೈಸೂರು: ನೂರು ವರ್ಷದ ಇತಿಹಾಸವಿರುವ ಮಂಟಪ ಹಾಗೂ ಕಲ್ಯಾಣಿ ಉಳಿವಿಗಾಗಿ ಆಗ್ರಹಿಸಿ ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಮೈಸೂರಿನ ರಾಜೇಂದ್ರನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಸಿಂಗರಿಶೆಟ್ಟಿ ಕಲ್ಯಾಣಿ ಪುನರುಜ್ಜೀವನಕ್ಕೆ ಒತ್ತಾಯಿಸಿ ಗುಂಪೊಂದು ಪ್ರತಿಭಟನೆ ನಡೆಸಿ, ದೇವಸ್ಥಾನ ಹಾಗೂ ಕಲ್ಯಾಣಿ ಸ್ವಚ್ಚತಾ ಕಾರ್ಯ ಮಾಡಬೇಕು. ಈ ಸಂಬಂಧ ಪಾಲಿಕೆ ಹಾಗೂ ಎಂಡಿಎ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸದರಿ ಸ್ಥಳದಲ್ಲಿ ಅನಧಿಕೃತವಾಗಿ ಶೆಡ್ಗಳ ಮಾದರಿಯಲ್ಲಿ ಅಂಗಡಿಗಳು ನಿರ್ಮಾಣ ಆಗಿದೆ. ಹೊಸ ಶೆಡ್ ಮಾದರಿ ಅಂಗಡಿಗಳು ಸಹ ನಿರ್ಮಾಣ ಆಗುತ್ತಿದೆ.
ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು. ಇದಕ್ಕೆ ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಪರಿಣಾಮ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಈ ವೇಳೆ ಸ್ಥಳಕ್ಕಾಗಮಿಸಿ ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಅವರು ಎರಡು ಗುಂಪುಗಳನ್ನು ಚದುರಿಸಿ ಗಲಾಟೆಯನ್ನು ತಿಳಿಗೊಳಿಸಿದರು.





