ಮೈಸೂರು: ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರದ 50;50ಅನುಪಾತದ ನಿವೇಶನ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 14 ಬದಲಿ ನಿವೇಶನಗಳ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಪೊಲೀಸರು ಗುರುವಾರ ಬಿಜೆಪಿಯ ಮಾಜಿ ಶಾಸಕರಾದ ಎಸ್.ಎ.ರಾಮದಾಸ್ ಹಾಗೂ ಎಲ್.ನಾಗೇಂದ್ರ ಅವರನ್ನು ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಗುರುವಾರ ಮಧ್ಯಾಹ್ನ ಕೆ.ಆರ್. ಕ್ಷೇತ್ರದ ಮಾಜಿ ಶಾಸಕ ಎಸ್.ಎ.ರಾಮದಾಸ್ ಅವರು ನಗರದ ಲೋಕಾಯುಕ್ತ ಕಚೇರಿಗೆ ಆಗಮಿಸಿದರು. ಸುಮಾರು ಒಂದು ತಾಸು ಅವರನ್ನು ವಿಚಾರಣೆ ನಡೆಸಿದ ಲೋಕಾ ಪೊಲೀಸರು ಅವರಿಂದ ಕೆಲ ಮಾಹಿತಿಗಳನ್ನು ಪಡೆದುಕೊಂಡರು.
ಲೋಕಾಯುಕ್ತ ವಿಚಾರಣೆ ಮುಗಿಸಿ ವಾಪಸ್ ತೆರಳುವ ವೇಳೆ ಮಾಧ್ಯಮದವರು ಅವರನ್ನು ಮಾತನಾಡಿಸಲು ಮುಂದಾದರು. ಈ ವೇಳೆ ನಾನು ಮುಡಾ ವಿಚಾರವಾಗಿ ಹಿಂದೆಯೂ ಕಾಮೆಂಟ್ ಮಾಡಿಲ್ಲ, ಈಗಲೂ ಕಾಮೆಂಟ್ ಮಾಡಲ್ಲ. ನೋ ರಿಯಾಕ್ಷನ್ ಎಂದು ಹೇಳಿ ರಾಮದಾಸ್ ತೆರಳಿದರು.
ರಾಮದಾಸ್ ಅವರಿಂದ ಮಾಹಿತಿ ಸಂಗ್ರಹಿಸಿದ ನಂತರ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಎಲ್.ನಾಗೇಂದ್ರ ಅವರು ಲೋಕಾ ಕಚೇರಿಗೆ ಆಗಮಿಸಿದರು. ಅವರು ಕೂಡ ಸುಮಾರು ಒಂದು ತಾಸು ಲೋಕಾ ಕಚೇರಿಯಲ್ಲಿ ಹಾಜರಿದ್ದು, ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.





