ಮೈಸೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಮಾರ್ಚ್.20ರವರೆಗೂ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭ ಹಾರೈಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶೈಕ್ಷಣಿಕ ಜೀವನದ ಅತ್ಯಮೂಲ್ಯ ಘಟ್ಟವಾದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ. ಸುಂದರ ಭವಿಷ್ಯದ ಕನಸನ್ನು ನನಸಾಗಿಸಲು ಒಳ್ಳೆಯ ಅಂಕಗಳಿಸಬೇಕೆಂಬ ದೃಷ್ಟಿಯಿಂದ ಶ್ರದ್ಧೆ ಮತ್ತು ನಿಷ್ಠೆಯಿಂದ ಓದಿ, ನಾಳೆ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಯಾವುದೇ ರೀತಿಯ ಆತಂಕˌ ಅನುಮಾನಗಳಿಲ್ಲದೆ ತಪ್ಪದೆ ಪರೀಕ್ಷೆಗೆ ಹಾಜರಾಗಿˌ ಮುಕ್ತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ಮೂಲಕ ಒಳ್ಳೆಯ ಅಂಕ ಪಡೆದು ನಿಮ್ಮ ತಂದೆ-ತಾಯಿˌ ಗುರುಗಳುˌ ಶಾಲೆ-ಕಾಲೇಜುಗಳು ಹಾಗೂ ಊರಿಗೆ ಕೀರ್ತಿ ತರುವಂತಹ ಪ್ರಯತ್ನ ಮಾಡಿ. ನಿಮ್ಮೆಲ್ಲರ ಅಗಣಿತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ, ನಿಮ್ಮ ಭವಿಷ್ಯ ಉಜ್ವಲವಾಗಲಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ತಾಯಿ ಚಾಮುಂಡೇಶ್ವರಿ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿದ್ದಾರೆ.





