ಮೈಸೂರು: ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾದ ವಿನಯ್ ಅವರು ಕಾಂಗ್ರೆಸ್ನವರ ಕ್ಷುಲಕ ರಾಜಕಾರಣಕ್ಕೆ ಬೇಸತ್ತು ಇಂದು ಇಹಲೋಕ ತ್ಯಜಿಸಿರುವ ಸುದ್ದಿ ತಿಳಿದು ಮನಸಿಗೆ ನೋವುಂಟಾಗಿದೆ ಅವರ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ದೊರಕಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕೊಡಗು ಬಿಜೆಪಿ ಸೆಲ್ನ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ ವಿನಯ್ ಅವರ ದುರಂತ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ವಿನಯ್ ಅವರ ಡೇತ್ ನೋಟ್ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಕೆಲವು ವ್ಯಕ್ತಿಗಳಿಂದ ನಿರಂತರ ಕಿರುಕುಳ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದ್ದರಿಂದ ಅವರು ಅಪಾರ ಮಾನಸಿಕ ಒತ್ತಡದಲ್ಲಿದ್ದರು ಎಂಬುದು ಸ್ಪಷ್ಟವಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೇ ಎಫ್ಐಆರ್ಗಳು ದಾಖಲಾಗುವುದರಿಂದ ಕೊಡಗಿನ ಅಭಿವೃದ್ಧಿಗಾಗಿ ಸಮರ್ಪಿತವಾಗಿರುವ ಯುವ ಕಾರ್ಯಕರ್ತನ ಮೇಲೆ ಅಸಹನೀಯ ಒತ್ತಡ ಉಂಟಾಗಿದೆ. ರಾಜಕೀಯ ಸೇಡಿನ ಈ ಕೃತ್ಯವು ಅತ್ಯಂತ ಖಂಡನೀಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿನಯ್ಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ನಾವು ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸುತ್ತೇವೆ. ಈ ದುಃಖದ ಸಂದರ್ಭದಲ್ಲಿ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಕೊಡಗಿನ ಜನರ ಸೇವೆಯಲ್ಲಿ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತ ವಿನಯ್ ಅವರ ಕುಟುಂಬ, ಸ್ನೇಹಿತರು ಮತ್ತು ಎಲ್ಲಾ ಸಹ ಕಾರ್ಯಕರ್ತರ ಜೊತೆ ಸದಾ ನಿಲ್ಲುತೇನೆ ಎಂದು ಭರವಸೆ ನೀಡಿದ್ದಾರೆ.





