ಮೈಸೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು ನಾಲ್ಕು ದಿನಗಳು ಇರುವಂತೆಯೇ ಇಂದು ಮೈಸೂರು-ಕೊಡಗು ಲೋಕಸಭಾ ಮೈತ್ರಿ ಪಕ್ಷದ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದಾರೆ. ಆ ಮೂಲಕ ಮೈಸೂರು-ಕೊಡಗು ಕ್ಷೇತ್ರದ ಜನರ ಬಗ್ಗೆ ಹಾಗೂ ಯದುವೀರ್ ಅವರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಈ ಪತ್ರದಲ್ಲಿ ನನ್ನ ಸಹೋದ್ಯೋಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೀ ಎಂದು ಪ್ರಾರಂಭಿಸಿದ್ದು, ಜನರ ಸೇವೆಯನ್ನು ಮಾಡುತ್ತಾ ಮೈಸೂರು ಒಡೆಯರ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ತಂತ್ರಜ್ಞಾನದೊಂದಿಗೆ ಸಂಸ್ಕೃತಿ ಪರಂಪರೆಯನ್ನು ಸಂಯೋಜಿಸುವ ನಿಮ್ಮ ಸಾಮರ್ಥ್ಯ ಎಲ್ಲರಿಗೂ ಮಾದರಿ. ನಿಮ್ಮ ಕ್ರೀಯಾಶೀಲಾ ಕಾರ್ಯಗಳು ಮೈಸೂರಿನ ಪ್ರಗತಿಗೆ ಪ್ರೇರಣೆಯಾಗಲಿದೆ.
ಜನರ ಆಶೀರ್ವಾದದಿಂದ ಗೆದ್ದು ನೀವು ಸಂಸತ್ಗೆ ಬರುತ್ತೀರಿ ಎಂಬ ವಿಶ್ವಾಸ ನನಗಿದೆ. ನಿಮ್ಮಂತ ಸಂಸದರು ನನಗೆ ದೊಡ್ಡ ಆಸ್ತಿ. ಸಮಾಜ, ದೇಶದ ಕಲ್ಯಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸುವ ಕಾಲ ಬಂದಿದೆ. ಈ ಬಾರಿಯ ಚುನಾವಣೆ ನಮ್ಮ ಭವಿಷ್ಯವನ್ನು ವರ್ತಮಾನದಿಂದ ಉಜ್ವಲಗೊಳಿಸಲು ಇರುವ ಅವಕಾಶವಾಗಿದೆ. ಈ ಬಾರಿಯೂ ಬಿಜೆಪಿ ಸ್ಥಿರ ಸರ್ಕಾರವನ್ನು ನೀಡಲಿದೆ. ಮತ್ತು 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕಾರ್ಯಕ್ಕೆ ವೇಗವನ್ನು ಸಹಾ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.