ಮೈಸೂರು: ಮಂಡ್ಯ ಸಂಸದೆ ಸುಮಲತ ಅಂಬರೀಶ್ ಬಿಜೆಪಿ ಸೇರ್ಪಡೆ ಬಳಿಕ ಇಂದು ಮೈಸೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ವೇದಿಕೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು, ಅಂದು ನಾನು ಪಕ್ಷೇತರ ಇಂದು ಬಿಜೆಪಿ ಎಂದು ಅಬ್ಬರದ ಭಾಷಣ ಮಾಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಮೋದಿ ಮತಯಾಚನೆ ಮಾಡಿದ ಕ್ಷಣವನ್ನು ನೆನಪಿಸಿಕೊಂಡು, ಸಂಸದೆಯಾದಾಗ ಮೋದಿ ತಮ್ಮ ಮಂಡ್ಯ ಜಿಲ್ಲೆಗೆ ನೀಡಿದ ಅನುದಾನದ ಬಗ್ಗೆ ನೆನೆದರು.
ಇಂದು ಭಾರತ ದೇಶ ವಿಶ್ವದ ಪಟ್ಟಿಯಲ್ಲಿ ಅಭಿವೃದ್ಧಿಯ ಮೂಲಕ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ. ಅಭಿವೃದ್ಧಿಯೆ ಮೂಲ ಮಂತ್ರ ಎಂದು ಜಪಿಸುತ್ತಿರುವ ಮೋದಿಯ ಕೊಡುಗೆಗಳ ಬಗ್ಗೆ ಮಾತನಾಡುವುಕ್ಕೆ ನಾಲ್ಕು ಐದು ದಿನ ಬೇಕಾಗುತ್ತದೆ ಎಂದು ಕೊಂಡಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ನೀವು ನೋಡಿರುವುದು ಬರಿ ಟ್ರೈಲರ್ ಅಷ್ಟೇ ಪಿಚ್ಚರ್ ಅಭಿ ಬಾಕಿ ಹೈ, ಮತ್ತೊಮ್ಮೆ ಮೋದಿ ಸರ್ಕಾರ ಬರುವುದು ನಿಶ್ಚಿತ. 2047 ದ ಹೊತ್ತಿಗೆ ಭಾರತ ದೇಶ ವಿಶ್ವದಲ್ಲೇ ಪ್ರಥಮ ಸ್ಥಾನ ಅಲಂಕರಿಸುವ ವಿಕಸಿತ ಸಂಕಲ್ಪ ಭಾರತಕ್ಕೆ ಶಕ್ತಿ ತುಂಬ ಬೇಕಿದೆ ಎಂದರು.
ಬಿಜೆಪಿಯನ್ನು 400 ಸ್ಥಾನ ಗೆಲ್ಲಿಸುವ ಮೂಲಕ ಮೋದಿಯವರಿಗೆ ನಾವು ಕೊಡುಗೆ ನೀಡಬೇಕು. ಭವ್ಯ ಭಾರತಕ್ಕಾಗಿ ನಿಮ್ಮ ಮತ ನೀಡುವ ಮೂಲಕ ಮತ್ತೊಮ್ಮೆ ಮೋದಿ ಬೆಂಬಲಿಸಿ ಎಂದರು.





