Mysore
19
overcast clouds
Light
Dark

ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಸಚಿವ ಹೆಚ್.ಸಿ.ಮಹಾದೇವಪ್ಪ ಶಂಕುಸ್ಥಾಪನೆ

ಮೈಸೂರು: ಕುವೆಂಪು ಚಿತಾಭಸ್ಮ ಸ್ಮಾರಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಅವರು ಶನಿವಾರ(ಜು.27) ಶಂಕು ಸ್ಥಾಪನೆ ನೆರವೇರಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಟಿ.ನರಸೀಪುರ ತಾಲೂಕು ಯಾಚೇನಹಳ್ಳಿ ಗ್ರಾಮದಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಶ್ವಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನದ ಶಂಕುಸ್ಥಾಪನೆ ನೆರವೇರಿಸಿದರು.

ಭವನದಲ್ಲಿ ಕುವೆಂಪು ಚಿಂತನೆ ಪಸರಿಸುವ ಕಾರ್ಯ ನಡೆಯಲಿದೆ. ಸಂಶೋಧಕರಿಗೆ ವಸತಿ ವ್ಯವಸ್ಥೆ, ಗ್ರಂಥಾಲಯ, ಸಭಾಭವನ, ಅತಿಥಿಗಳ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ನಿರ್ಮಿತಿ ಕೇಂದ್ರವು 10 ತಿಂಗಳಲ್ಲಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಿದೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೊ.ಕೆ.ಎಸ್‌ ಭಗವಾನ್‌ ಮಾತನಾಡಿ, ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಕೆಲಸ ಮಾಡಿ ಅದ್ಭುತ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ 20ನೇ ಶತಮಾನ ಕುವೆಂಪು ಯುಗ ಎಂದರು.

ಭಗವಾನ್‌ ಬುದ್ದ ರೈತನ ಮಗ. ಮನುಷ್ಯರೆಲ್ಲ ಒಂದು ಎಂದು ಮೊದಲು ಹೇಳಿದ್ದು ಬುದ್ಧ. ನಾವೆಲ್ಲರೂ ಅವರನ್ನು ಅನುಸರಿಸಬೇಕು. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್‌ ಅವರನ್ನು ಎಷ್ಟು ಸ್ಮರಿಸಿದರೂ ಸಾಲುವುದಿಲ್ಲ. ಸಮಾನತೆ ಹಾಗೂ ಸ್ವತಂತ್ರ್ಯದ ಪರಿಕಲ್ಪನೆ ನೀಡಿದ್ದು ಬುದ್ದ. ಬುದ್ಧನನ್ನೇ ಅನುಸರಿಸಿ ಅವರ ತತ್ವ ಅಳವಡಿಸಿಕೊಂಡು, ದೇಶಕ್ಕೆ ಸಮಾನತೆ ಸಂವಿಧಾನ ನೀಡಿದ್ದು ಅಂಬೇಡ್ಕರ್‌ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಸುನೀಲ್ ಬೋಸ್, ನಿವೇಶನ ದಾನಿಗಳಾದ ಶಂಕರೇಗೌಡ, ನಾಗಾನಂದ ಸ್ವಾಮೀಜಿ ಮುಂತಾದವರು ಉಪಸ್ಥಿತರಿದ್ದರು.