Mysore
24
few clouds

Social Media

ಶನಿವಾರ, 14 ಮಾರ್ಚ್ 2026
Light
Dark

ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯ : ನಾಗಲಕ್ಷ್ಮೀ ಚೌಧರಿ

ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಎಚ್ಚರಿಕೆ ನೀಡಿದರು.

ನಗರದ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ‘ಮನೆ ಮನೆಗೆ ಮಹಿಳಾ ಆಯೋಗ’ ಸಭೆಯಲ್ಲಿ ಮಾತನಾಡಿ, ತಿಂಗಳಿಗೊಮ್ಮೆ ಋತುಚಕ್ರದ ರಜೆಯನ್ನು ಕಡ್ಡಾಯವಾಗಿ ಕೊಡಬೇಕು. ಇದು ಸರ್ಕಾರದ ಆದೇಶವಾಗಿರುವುದರಿಂದ ಉಲ್ಲಂಸಿದರೆ ಕ್ರಮ ಜರುಗಿಸಲಾಗುವುದು. ರಜೆ ಕೊಡದಿರುವ ಕಂಪೆನಿಗಳ ಬಗ್ಗೆ ಮಹಿಳಾ ಆಯೋಗದ ಗಮನಕ್ಕೆ ತರಬೇಕು ಎಂದು ಕಿವಿಮಾತು ಹೇಳಿದರು.

ಉತ್ತರ ಕರ್ನಾಟಕದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯು ಗರ್ಭೀಣಿಯಾಗಿದ್ದ ಘಟನೆಯ ಅಘಾತದಿಂದ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದ ಎಲ್ಲ ಬಾಲಕಿಯರ ವಸತಿ ನಿಲಯಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಬೇಕು ಎಂದು ಸುತ್ತೋಲೆ ಹೊರಡಿಸಿದೆ. ಪ್ರೌಢಶಾಲೆ, ಪದವಿ ಪೂರ್ವ, ಪದವಿ ವಿದ್ಯಾರ್ಥಿನಿಲಯಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಆಂತರಿಕ ದೂರು ಸಮಿತಿ ರಚಿಸಿ
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಕಚೇರಿಗಳು, ಖಾಸಗಿ ಕಂಪೆನಿಗಳು, ಹೋಟೆಲ್, ರೆಸಾರ್ಟ್, ಕಾರ್ಖಾನೆ ಸೇರಿದಂತೆ ಪ್ರತಿ ವಲಯದಲ್ಲಿಯೂ ದುಡಿಯುತ್ತಿರುವ ಹೆಣ್ಣು ಮಕ್ಕಳ ರಕ್ಷಣೆಗೆ ‘ಆಂತಕರಿಕ ದೂರು ಸಮಿತಿ’ ರಚಿಸಬೇಕು. ಇದರ ಮುಖ್ಯಸ್ಥರು ಮಹಿಳೆಯೇ ಆಗಿರಬೇಕು. ಎನ್‌ಜಿಒದ ಒಬ್ಬರು ಸದಸ್ಯರು ಇರಬೇಕು. ಮೂರು ತಿಂಗಳಿಗೊಮ್ಮೆ ಮಹಿಳಾ ಸಿಬ್ಬಂದಿಗಳ ಜೊತೆ ಸಭೆ ನಡೆಸಬೇಕು. ಮಹಿಳಾ ಹಕ್ಕುಗಳ ಜಾಗೃತಿ ಮೂಡಿಸಬೇಕು. ಸಭೆ ನಡೆಸಿದ್ದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲವಾದರೆ ಪರವಾನಗಿ ರದ್ದುಪಡಿಸಲಾಗುವುದು.

ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಿ
ತಾಲ್ಲೂಕು ಮಟ್ಟದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕುಡಿಯುವ ನೀರು, ಬಿಸಿ ನೀರು, ಶೌಚಾಲಯದ ಸ್ವಚ್ಛತೆ, ಔಷಧಗಳು, ಉಪಕರಣಗಳ ಶುಚಿತ್ವದ ಕುರಿತು ವರದಿ ನೀಡುವಂತೆ ಜಿಲ್ಲಧಿಕಾರಿಗೆ ಕೇಳಲಾಗಿದೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಾಲೇಜುಗಳಲ್ಲಿ ನೀರಿನ ಸೌಲಭ್ಯ ಮತ್ತು ಶೌಚಾಲಯಗಳಲ್ಲಿ ಶುಚಿತ್ವದ ಜಾಗೃತಿ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

Tags:
error: Content is protected !!