ಮೈಸೂರು: ಕೇಂದ್ರ ಸರ್ಕಾರ ದರ ಏರಿಕೆ ಮಾಡಿದರೆ ಬಿಜೆಪಿಯವರರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಅದೇ ನಮ್ಮ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದರೆ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡುತ್ತಾರೆ. ಅದರೆ ಇದೊಂದು ನಾಟಕದ ಯಾತ್ರೆಯಾಗಿ ಕಾಣುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ಏಪ್ರಿಲ್.9) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಪ್ರಧಾನಿ ಮಂತ್ರಿ ಡಾ.ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕ್ರೋಡ್ ಆಯಿಲ್ ಬೆಲೆ ಹೆಚ್ವಿದ್ದರೂ ಪೆಟ್ರೋಲ್ ಮತ್ತು ಡೀಸಲ್ನ ಬೆಲೆ 50 ರಿಂದ 60 ರೂ. ಇತ್ತು. ಆದರೆ ಈಗ ಕ್ರೋಡ್ ಆಯಿಲ್ ಬೆಲೆ ಇಳಿಕೆಯಾಗಿದ್ದರೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಪ್ಪಟ್ಟಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪೆಟ್ರೋಲ್ನ ಮೂಲ ದರ 42.60. ಪೈಸೆ ಇದ್ದು, ನಮ್ಮ ದೇಶದಲ್ಲಿ 103 ರೂ.ಗೆ ಮಾರಾಟ ಮಾಡುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ ಲೀಟರ್ಗೆ 60 ರೂ. ಲಾಭವಾಗುತ್ತಿದೆ. ಡಿಸೇಲ್ಗೆ 91 ರೂ. ಇದ್ದು, 43 ಪ್ರಾಫಿಟ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಶೇ. 60% ತೆರಿಗೆಯನ್ನು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹಾಕಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ವಾರ್ಷಿಕದಲ್ಲಿ ಸುಮಾರು 43 ಲಕ್ಷ ಕೋಟಿ ರೂ.ಲೂಟಿ ಮಾಡುತ್ತಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ 143 ಬಾರಿ ಬೇರೆ ಬೇರೆ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ್ಕೆ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಸೆಸ್ ನಿಂದ ಬರುವುದು ಕೇವಲ 7 ರೂ. ಮಾತ್ರ. ಅದಕ್ಕೆ ನಮ್ಮ ರಾಜ್ಯ ಸರ್ಕಾರ ಕೇವಲ ಪೆಟ್ರೋಲ್ ಮತ್ತು ಡಿಸೇಲ್ 2 ರೂ. ಹೆಚ್ಚಳ ಮಾಡಿದ್ದಕ್ಕೆ ಬಿಜೆಪಿಯವರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆದರೆ ಯಾವ ನೈತಿಕತೆ ಇದೆ? ಕೇಂದ್ರದಿಂದ ಟೋಲ್ ದರ ಮಾಡಿದರೂ ಅವರು ಯಾಕೆ ಕೇಳುತ್ತಿಲ್ಲ? ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವ ಬದಲು ಕೇಂದ್ರ ಸರ್ಕಾರದ ವಿರುದ್ಧ ಅವರೇ ಹೋರಾಟ ಮಾಡಬೇಕು ಎಂದು ಹರಿಹಾಯ್ದರು.
ಹಾಲಿನ ದರ ಏರಿಕೆಯ ವಿಚಾರಕ್ಕೆ ಬಂದರೆ ನಮ್ಮ ರಾಜ್ಯಕ್ಕಿಂತ ಬೇರೆ-ಬೇರೆ ರಾಜ್ಯಗಳಲ್ಲೇ ಹಾಲಿನ ದರ ಅಧಿಕವಾಗಿದೆ. ಹಾಲಿನ ದರ ದೆಹಲಿಯಲ್ಲಿ 63 ರೂ ಇದ್ದರೆ, ಕೇರಳಾದಲ್ಲಿ 54 ರೂ.ಇದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ 46 ರೂ ಇದೆ. ಇನ್ನೂ ಹೆಚ್ಚಳ ಮಾಡಿದ ಹಣವನ್ನೂ ಕೂಡ ರೈತರಿಗೆ ನೀಡಲಾಗುತ್ತದೆ. ಹೀಗಿದ್ದರೂ ಬಿಜೆಪಿಯವರೂ ಸುಖ ಸುಮ್ಮನೆ ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಾರೆ, ಹಾಗಾಗಿ ಅವರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರವನ್ನೇ ಪ್ರಶ್ನೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.





