ಮೈಸೂರು: ಯದುವೀರ್ ತುಂಬ ಸರಳ ವ್ಯಕ್ತಿ, ಜೊತೆಗೆ ವಿದ್ಯಾವಂತರಾಗಿದ್ದಾರೆ, ಅವರಿಗೆ ರಾಜಕೀಯ ಅವಶ್ಯಕತೆ ಇಲ್ಲ, ಆದರೆ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. ಯದುವೀರ್ ಒಡೆಯರ್ಗೆ ಮತ ನೀಡಿ ಮೈಸೂರು ಮಹಾರಾಜರ ಋಣ ತೀರಿಸಿ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಮತ ಪ್ರಚಾರ ಮಾಡಿ, ಕೆ.ಆರ್ ಕ್ಷೇತ್ರದಲ್ಲಿ ನಡೆದ ನಾರಿಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್ ಕಳೆದ ಬಾರಿ ನಾನು ಪಕ್ಷೇತರವಾಗಿ ಮಂಡ್ಯದಿಂದ ಸ್ಪರ್ಧಿಸಿದಾಗ ನನ್ನ ನೆರವಿಗೆ ನಿಂತಿದ್ದೇ ನನ್ನ ಮಹಿಳೆಯರು. ಮೈಸೂರಿಗೂ ನಮಗೂ ಅವಿನಾಭಾವ ಸಂಬಂಧ ಇದೆ. ನನ್ನ ಪತಿ ಅಂಬರೀಶ್ ಓದಿದ್ದು, ಬೆಳೆದಿದ್ದು ಇದೇ ಜಾಗದಲ್ಲಿ. ನಾನೂ ಕೂಡ ಇಲ್ಲಿ ಹಲವಾರು ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದೇನೆ. ಇಂತಹ ವೈಭವದ ಮೈಸೂರಿಗೆ ಮಹಾರಾಜರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.
ಕೇಂದ್ರದ ಬಿಜೆಪಿಯವರು ಮೈಸೂರಿಗೆ ಹಲವಾರು ಅಭಿವೃದ್ಧಿ ಯೋಜನೆ ತಂದಿದ್ದಾರೆ. ವಿಕಸಿತ ಭಾರತದ ಸಂಕಲ್ಪ ಹೊಂದಿರುವ ಮೋದಿಯವರು ಭಾರತವನ್ನು ಪ್ರಪಂಚದಲ್ಲೇ ಮೊದಲ ಸ್ಥಾನಕ್ಕೇರಿಸಲು ಪಣತೊಟ್ಟಿದ್ದಾರೆ. ಹೀಗಾಗಿ ಮೋದಿ ಅವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರಿನ ಜನರಿಗೆ ಒಂದಲ್ಲಾ ರೀತಿ ಮೈಸೂರು ರಾಜರ ಕೊಡುಗೆಗಳಿವೆ. ಅವರ ಋಣ ತೀರಿಸುವ ಅವಕಾಶ ಒದಗಿ ಬಂದಿದೆ. ಕೆಆರ್ಎಸ್ ಅಣೆಕಟ್ಟೆಯಿಂದ ಸಹಸ್ರಾರು ಜನರಿಗೆ ಅನುಕೂಲ ಆಗಿದೆ. ಹೀಗಾಗಿ ಯದುವೀರ್ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.