ತಿ.ನರಸೀಪುರ : ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿದ್ದುದನ್ನು ಯುವಕರಿಬ್ಬರು ಬೈಕ್ನಲ್ಲಿ ತೆರಳುವಾಗ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆಯವರು ಗ್ರಾಮಕ್ಕೆ ತೆರಳಿ ಬೋನನ್ನು ಇಟ್ಟಿದ್ದಾರೆ.
ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುವ ಮೂಲಕ ರೈತರಿಗೆ ಆತಂಕವನ್ನುಂಟುಮಾಡಿದೆ. ಸಂಜೆ ವೇಳೆ ಜಮೀನಿಗೆ ರೈತರು ನೀರು ಹಾಯಿಸಲು ತೆರಳಲು ಹಿಂಜರಿಯುತ್ತಿದ್ದಾರೆ. ದನ ಕರು ಹಸು, ಮೇಕೆ, ಆಡು, ಕುರಿಗಳನ್ನು ಮೇಯಿಸಲು ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ.
ಈಗಾಗಲೇ ಕೆಲವು ಗ್ರಾಮಗಳಲ್ಲಿ ರಾತ್ರಿವೇಳೆ ಚಿರತೆ ಬೀದಿ ನಾಯಿಗಳನ್ನು ಅರೆಬೆರೆ ತಿಂದು ಹೋಗಿರುವ ಘಟನೆಗಳೂ ನಡೆದಿವೆ. ಹಾಗಾಗಿ ಅರಣ್ಯ ಇಲಾಖೆಯವರು ಬೋನು ಇಟ್ಟಿರುವ ಗ್ರಾಮಗಳಲ್ಲಿ ಡ್ರೋನ್ ಬಳಸಿ, ಶೀಘ್ರದಲ್ಲಿ ಚಿರತೆ ಸೆರೆಹಿಡಿಯುವ ಮೂಲಕ ಗ್ರಾಮದ ಜನರಲ್ಲಿರುವ ಆತಂಕ ಹೋಗಲಾಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.




