Mysore
30
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಮಾಹಿತಿ ನೀಡದ ಕೆಎಸ್‌ಒಯು: ಮುಕ್ತ ವಿವಿ ಕುಲಪತಿಗೆ ಮಾಹಿತಿ ಆಯೋಗ ನೋಟಿಸ್

ಮೈಸೂರು: ಆರ್‌ಟಿಐ ಅರ್ಜಿದಾರರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದಿರುವ ಕಾರಣ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಮಾಹಿತಿ ಆಯೋಗ ನೋಟಿಸ್‌ ನೀಡಿದೆ.

ಯಾವುದೇ ಪ್ರತಿನಿಧಿ ಕಳುಹಿಸದೇ ನಂ.6 ರಂದು ನೇರವಾಗಿ ವಿಚಾರಣೆಗೆ ಕುಲಪತಿ ಮತ್ತು ಕುಲಸಚಿವರೇ ಹಾಜರಾಗುವಂತೆ ರಾಜ್ಯ ಮಾಹಿತಿ ಆಯೋಗವು  ಹೇಳಿದೆ. ಕುಲಪತಿಯೊಬ್ಬರಿಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಇಲ್ಲಿನ ವಿಜಯನಗರದ ನಿವಾಸಿ ಆರ್.‌ಎನ್‌.ಸತ್ಯನಾರಾಯಣ ಎಂಬುವವರು 2024ರ ಮೇ.6ರಂದು, ಆರ್‌ಟಿಐ ಅಡಿಯಲ್ಲಿ ಕುಲಸಚಿವರ ವಿಭಾಗಕ್ಕೆ 2023ರ ಜ.10ರಿಂದ ಜ.20ರವರೆಗೆ ಬಂದಿರುವ ಅಂಚೆ ಅಥವಾ ಖುದ್ದಾಗಿ ಬಂದ ಪತ್ರಗಳ ಸ್ವೀಕೃತಿಯ ದಾಖಲಾತಿ ಪುಸ್ತಕದ ದೃಢೀಕೃತ ಪ್ರತಿಗಳನ್ನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವೂ ಯಾವ ಉತ್ತರವನ್ನು ನೀಡಿರಲಿಲ್ಲ.

ಅರ್ಜಿದಾರರು 2024ರ ಜುಲೈ 7ರಂದು ಮಾಹಿತಿಯನ್ನು ಕಾಲಮಿತಿಯಲ್ಲಿ ನೀಡದೆ ಕಚೇರಿಗೆ ಅಲೆದಾಡಿಸಿದ್ದಾರೆಂದು ಮೇಲ್ಮನವಿ ಪ್ರಾಧಿಕರಕ್ಕೆ ದೂರು ಸಲ್ಲಿಸಿದ್ದರು. ಬಳಿಕ ವಿಶ್ವವಿದ್ಯಾನಿಲಯದವರು ಈ ಬಗ್ಗೆ ಮಾಹಿತಿ ನೀಡಲು ಆಗುವುದಿಲ್ಲವೆಂಬಂತೆ ತಿಳಿಸಿದ್ದರು. ಆದರೆ, ವಿವಿ ಅವರು ಯಾವ ನಿಯಮದಡಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಹೇಳಿರಲಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ಸತ್ಯನಾರಾಯಣ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಆಧಾರದ ಮೇರೆಗೆ ರಾಜ್ಯ ಮಾಹಿತಿ ಆಯೋಗವೂ ಕುಲಪತಿ ಹಾಗೂ ಕುಲಸಚಿವರಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ. ಜೊತೆಗೆ ಸಾರ್ಜನಿಕ ಮಾಹಿತಿ ಅಧಿಕಾರಿಯ ಹೆಸರು ಹಾಗೂ ವಿಳಾಸವನ್ನು ಕಡ್ಡಾಯವಾಗಿ ತರುವಂತೆಯೂ ಸೂಚಿಸಿದೆ.

Tags:
error: Content is protected !!