ಮೈಸೂರು : ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಿನ್ನೆಲೆ ನಗರದ ಲಲಿತ್ ಮಹಲ್ ಟಿ ಜಂಕ್ಷನ್ ವೃತ್ತದಲ್ಲಿ ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದಾಗ ಪೊಲೀಸರು ತಡೆಯೊಡ್ಡಿದ್ದಾರೆ.
ಕೆಂಪೇಗೌಡರ ನೂತನ ಪ್ರತಿಮೆ ಸ್ಥಾಪಿಸಲು ಅನುಮತಿ ಪಡೆಯದ ಕಾರಣ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಮೆ ಸ್ಥಾಪಿಸುವುದನ್ನ ತಡೆ ಹಿಡಿದಿದ್ದಾರೆ. ಇನ್ನು ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಡಿಸಿಪಿ ಜಾಹ್ನವಿ ಸಹ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಳಿಕ ಪೊಲೀಸರಿಂದ ಅನುಮತಿ ದೊರಕದ ಹಿನ್ನೆಲೆ, ಕೆಂಪೇಗೌಡರ ಫ್ಲೆಕ್ಸ್ ಮಾತ್ರ ಇಟ್ಟು ಶಾಸಕ ಹರೀಶ್ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾದೇಗೌಡ ಸೇರಿ ಇತರ ಒಕ್ಕಲಿಗ ಮುಖಂಡರು ಪೂಜೆ ಸಲ್ಲಿಸಿದರು.
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಶಾಸಕ ಕೆ ಹರೀಶ್ ಗೌಡ, ಕೆಂಪೇಗೌಡ ಪ್ರತಿಮೆಗೆ ಅವಕಾಶ ಸಿಕ್ಕಿಲ್ಲ. ಸಂಗೀತ ಕಾರ್ನಾರ್ ಜಂಕ್ಷನ್ ಗೆ ಕೆಂಪೇಗೌಡ ವೃತ್ತ ಎಂದು ನಾಮಕಾರಣ ಮಾಡಲಾಗಿತ್ತು. ಹೀಗಾಗಿ ಪ್ರತಿಮೆ ನಿರ್ಮಾಣ ಕಷ್ಟ ಆಗಲ್ಲ ಅಂದುಕೊಂಡ್ವಿ. ಆದರೆ ಅಧಿಕಾರಿಗಳು ಪ್ರತಿಮೆ ಸ್ಥಾಪನೆ ಮಾಡಲು ಅವಕಾಶ ಕೊಡಲಿಲ್ಲ. ಈ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಯಾವುದೇ ಅಡ್ಡಿಗಳಿಲ್ಲ. ಸರ್ಕಾರದ ಅನುಮತಿ ಪಡೆದು ಸ್ಥಾಪಿಸಿ ಎಂದು ಹೇಳಿದ್ದಾರೆ. ಈಗಾಗಲೇ ಸಿಎಂ ಮತ್ತು ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. 15 ದಿನಗಳಲ್ಲಿ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದು ತಿಳಿಸಿದರು.





