ಮುಂಬೈ : ‘ಕಾಂತಾರ’ ಸಿನಿಮಾದಲ್ಲಿ ದೈವದ ಕುರಿತು ವೇದಿಕೆ ಮೇಲೆ ಅನುಕರಣೆ ಮಾಡಿ ‘ಫೀಮೇಲ್ ಗೋಸ್ಟ್’ ಎಂದು ಕರೆದು ವಿವಾದಕ್ಕೆ ಒಳಗಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರು, ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸುವ ಜತೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಎಂದು ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್ಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ರಣವೀರ್ ಸಿಂಗ್ ಎಕ್ಸ್ನಲ್ಲಿ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ ಅದರಲ್ಲಿ ಪ್ರಮಾಣಿಕತೆ ಕಾಣುವುದಿಲ್ಲ. ಹೀಗಾಗಿ ಅವರು ಮೌಖಿಕವಾಗಿ ಕ್ಷಮೆ ಕೋರಬೇಕು ಎಂದು ದೂರುದಾರರ ಪರ ವಕೀಲರು ಕೋರ್ಟ್ಗೆ ತಿಳಿಸಿದರು. ಆಗ ಪೀಠ ರಣವೀರ್ ಪ್ರಭಾವಿ ನಟರು, ಅವರಿಗೆ ಪಶ್ಚಾತಾಪ ವ್ಯಕ್ತಪಡಿಸುವ ಮನಸ್ಸಿರಬೇಕು ಎಂದು ಹೇಳಿತು. ಆವಾಗ ಇದಕ್ಕೆ ಉತ್ತರಿಸಿದ ರಣವೀರ್ ಪರ ವಕೀಲ ಸಜನ್ ಪೂವಯ್ಯ, ಕ್ಷಮೆ ಕೋರಿ ರಣವೀರ್ ಪ್ರಮಾಣ ಪತ್ರ ಸಲ್ಲಿಸಲಿದ್ದಾರೆ. ಜತೆಗೆ ದೇವಾಲಯಕ್ಕೂ ಭೇಟಿ ನೀಡುತ್ತಾರೆ. ದಿನಾಂಕವನ್ನು ನಿಗದಿಪಡಿಸಿ ನ್ಯಾಯಲಯಕ್ಕೆ ತಿಳಿಸಲಾಗುವುದು ಎಂದರು.
ಇದನ್ನು ಆಲಿಸಿದ ಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು.





