Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ನಂಜನಗೂಡಿನ ತಗ್ಗು ಪ್ರದೇಶಗಳಿಗೆ ಕಂಟಕ

ನಂಜನಗೂಡು: ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಉಂಟಾಗಿದೆ. ಈ ಬೆನ್ನಲ್ಲೇ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ಹರಿದು ಬರುತ್ತಿದ್ದು, ಹೊರಹರಿವನ್ನು ಕೂಡ ಹೆಚ್ಚಳ ಮಾಡಲಾಗಿದೆ.

ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಪಿಲಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದಕ್ಷಿಣ ಕಾಶಿ ನಂಜನಗೂಡಿಗೆ ಜಲ ಕಂಟಕ ಎದುರಾಗಿದೆ.

ಮೈಸೂರು-ನಂಜನಗೂಡು ಹೆದ್ದಾರಿ ರಸ್ತೆ ಮುಳುಗಡೆಯಾಗಿರುವುದರಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬದಲಿ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇನ್ನು ನಂಜನಗೂಡು ಪಟ್ಟಣದ ಹಲವು ತಗ್ಗು ಪ್ರದೇಶಗಳಿಗೂ ಕೂಡ ಕಪಿಲಾ ನದಿಯ ಪ್ರವಾಹದ ನೀರು ನುಗ್ಗಿದ್ದು, ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಕಪಿಲಾ ನದಿ ತೀರದಲ್ಲಿರುವ ಶ್ರೀ ಬಸವೇಶ್ವರ, ಲಿಂಗಭಟ್ಟರ ಗುಡಿ, ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ದತ್ತಾತ್ರೇಯ ಸ್ವಾಮಿ ಹಾಗೂ ಪರಶುರಾಮ ದೇವಾಲಯಗಳು ಸಂಪೂರ್ಣ ಜಲಾವೃತವಾಗಿವೆ.

ಇದಲ್ಲದೇ ಐತಿಹಾಸಿಕ 16 ಕಾಲು ಮಂಟಪ ಮತ್ತು ಹಳೆಯ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗಿದೆ. ಇನ್ನು ಕಪಿಲಾ ನದಿ ಪಾತ್ರದ ತಗ್ಗು ಪ್ರದೇಶಗಳು ಹಾಗೂ ಅನೇಕ ಜಮೀನುಗಳು ಜಲಾವೃತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

 

Tags:
error: Content is protected !!