ಮೈಸೂರು: ಹನಿಟ್ರ್ಯಾಪ್ ಕೇಸ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನಿಜವಾದ ಕಿಂಗ್ ಪಿನ್. ಇದರಲ್ಲಿ ನಮ್ಮ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರದ್ದು ಯಾವುದೇ ಪಾತ್ರವಿಲ್ಲವೆಂದು ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.24) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಹ ಆರು ತಿಂಗಳ ಹಿಂದೆ ದೂರು ದಾಖಲಿಸಿದ್ದೆ. ಈ ಭಾಗದ ಅನೇಕಇಗೆ ಹನಿಟ್ರ್ಯಾಪ್ ಆಗಿತ್ತು. ಈಗೀಗ ರಾಜಕಾರಣಿಗಳಿಗೆ ಮಾತ್ರವಲ್ಲ ಪ್ರೊಫೆಸರ್, ಕೈಗಾರಿಕೋದ್ಯಮಿ ಮತ್ತು ಸಾಮಾನ್ಯ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಹನಿಟ್ರ್ಯಾಪ್ ಹಿಂದೆ ಅಮಿತ್ ಶಾ ಪಾತ್ರವಿದೆ. ಅವರೇ ನಿಜವಾದ ಕಿಂಗ್ ಪಿನ್ ಆಗಿದ್ದಾರೆ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಯಾವುದೇ ಪಾತ್ರವಿಲ್ಲ. ಶಾಸಕ ಮುನಿರತ್ನ ಸುಮ್ಮನೆ ಅಪಾದನೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ಹೇಳಲು ಅವನ್ಯಾರು? ಅವನೇ ದೊಡ್ಡ ಕೆಡಿ, ಅವರು ಮತ್ತೊಬ್ಬರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಆದರೆ ನಮಗೆ ಒಂದು ಕಡೆ ಯಾವಾಗಲೂ ಭಯವಾಗುತ್ತದೆ. ಸದನದಲ್ಲಿ ಎಲ್ಲಿ ಎಚ್ಐವಿ ಇಂಜೆಕ್ಷನ್ ಮಾಡಿಬಿಡ್ತಾನೋ ಎಂಬ ಭಯ. ಅನೇಕರಿಗೆ ಅವನು ಎಚ್ಐವಿ ಇಂಜೆಕ್ಷನ್ ಮಾಡಲು ಹೋಗಿದ್ದವನು ಎಂದು ಕಿಡಿಕಾರಿದರು.
ಇನ್ನು ಮುನಿರತ್ನ ಅವರೇ ಹಲವರ ಸಿಡಿ ಮಾಡಿಸಿಟ್ಟುಕೊಂಡಿದ್ದು, ರಾಜಕಾರಣಿಗಳಿಗೆ ಉಳಿಗಾಲವಿಲ್ಲ. ಹಾಗಾಗಿ ರಾಜಕಾರಣ ಮುಂದೇ ಯಾವ ಸ್ಥಿತಿಗಾದರೂ ತಲುಪಬಹುದು. ಆರೋಗ್ಯಕರವಾದ ರಾಜಕಾರಣ ಅಸಹ್ಯ ಹುಟ್ಟಿಸಿದ್ದು, ನನಗೆ ರಾಜಕಾರಣ ಸಾಕಾಗಿದೆ. ಈ ಬೆಳವಣಿಗೆ ಗಮನಿಸಿದರೆ ರಾಜಕಾರಣವೇ ಬೇಡ ಎನ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.





