Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೇಶ ಕಟ್ಟುವಲ್ಲಿ ಕೈಜೋಡಿಸಿ, ಚುನಾವಣೆಯನ್ನು ಯಶಸ್ವಿಗೊಳಿಸಿ : ಡಾ ಕೆ.ವಿ.ರಾಜೇಂದ್ರ

ಮೈಸೂರು : ದೇಶಕ್ಕೆ ಸೇವೆ ಸಲ್ಲಿಸುವ ಸುವರ್ಣಾವಕಾಶ ಚುನಾವಣೆಯಲ್ಲಿ ದೊರಕಿದ್ದು, ಇದರಲ್ಲಿ ಪ್ರತಿಯೊಬ್ಬ ಸ್ವಯಂ ಸೇವಕರು ಮುಂದೆಬಂದು ತಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿ ದೇಶವನ್ನು ಕಟ್ಟುವಲ್ಲಿ ಕೈಜೋಡಿಸಬೇಕು. ಇದರಿಂದ ಚುನಾವಣೆಯು ಯಶಸ್ವಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ ರಾಜೇಂದ್ರ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶಾರದಾ ವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆದ ಮತಗಟ್ಟೆಗೆ ನೇಮಕಗೊಂಡಿರುವ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಇದು ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬರೂ ಚುನಾವಣೆಯಲ್ಲಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಭಾರತ ಸಂವಿಧಾನ ನೀಡಿದೆ. ಹಾಗಾಗಿ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮತದಾನ ಮಾಡುವಂತೆ ಸ್ವಯಂ ಸೇವಕರು ನಾಗರೀಕರಿಗೆ ತಿಳಿಸಿಕೊಡಬೇಕು ಎಂದರು.

ಸ್ವಯಂ ಸೇವಕರು ಮತದಾರರಿಗೆ ಮತಗಟ್ಟೆ ಕೇಂದ್ರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು. ಪ್ರತ್ಯೇಕ ಸರದಿ ಸಾಲನ್ನು ಅನುಸರಿಸಿ, ಶಾಂತಿಯುತ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅಶಕ್ತರು ಅಂಗವಿಕಲರು,ವೃದ್ಧರು ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ ಮತದಾನ ಮಾಡಲು ಸಹಾಯಾವಾಗುವಂತೆ ಮತಗಟ್ಟೆಗಳಲ್ಲಿ ಕಲ್ಪಿಸಲಾಗಿರುವ ವೀಲ್ ಚೇರ್ ,ಕುಡಿಯುವ ನೀರು ,ಶೌಚಾಲಯ ವಿಶ್ರಾಂತಿ ಕೊಠಡಿಯ ಹಾಗೂ ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಮತದಾರಿಗೆ ಸೂಕ್ಷ್ಮವಾಗಿ ತಿಳಿಸಿ ಮತದಾನದಿಂದ ಹಿಂಜಯುವುದನ್ನು ತಡೆಯಬೇಕು ಎಂದು ತಿಳಿಸಿದರು.

ಸ್ವಯಂ ಸೇವಕರು ಭವ್ಯ ಭಾರತದ ಪ್ರಜೆಗಳು ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಕೆಲಸ ನಿರ್ವಹಿಸುವವರು ಸ್ವಯಂ ಸೇವಕರು. ಸೈನಿಕರು ದೇಶವನ್ನು ಕಾಯುವಂತೆ, ನಿಮಗೆ ದೇಶವನ್ನು ಕಟ್ಟುವಂತಹ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಚುನಾವಣೆಯ ಯಶಸ್ಸಿನ ಭಗವಾಗಬೇಕು ಎಂದರು.

ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಮಾಡಿ, ಮತದಾನವನ್ನು ಯಶಸ್ವಿಗೊಳಿಸುವಲ್ಲಿ ಸ್ವಯಂ ಸೇವಕರ ಪಾತ್ರ ಹೆಚ್ಚಾಗಿದ್ದು ಶಾಂತಿಯುತ ಮತದಾನ ಮಾಡುವಂತೆ ಮತದಾರರನ್ನು ಪ್ರೇರೇಪಿಸಬೇಕು. ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಸ್ವಯಂ ಸೇವಕರಾಗಿ ಆಯ್ಕೆ ಆದವರು ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಮತಗಟ್ಟೆಯ ಬಳಿ ಬಂದು ತಮ್ಮ ಮತಗಟ್ಟೆಯನ್ನು ಮುಂಚಿತವಾಗಿ ಪರೀಕ್ಷಿಸಿಕೊಳ್ಳಬೇಕು. ಮತಗಟ್ಟೆಯ ಬಳಿ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳೊಂದಿಗೆ‌ ಸಮನ್ವಯತೆ ಸಾಧಿಸಿ ಮತ ಹಾಕಲು ಬಂದವರಿಗೆ ಮತಗಟ್ಟೆಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ.ಗಾಯಿತ್ರಿ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾದ ಚುನಾವಣೆಯನ್ನು ಪ್ರಜಾಪ್ರಭುತ್ವ ಹಬ್ಬದಂತೆ ಸ್ವೀಕರಿಸಿ ಅದನ್ನು ಯಶಸ್ವಿಗೊಳಿಸುವಲ್ಲಿ ಸ್ವಯಂ ಸೇವಕರ ಪಾತ್ರ ಬಹಳ ಮುಖ್ಯ. ಪ್ರತಿಯೊಬ್ಬ ಸ್ವಯಂ ಸೇವಕರು ಕೂಡಾ ಈ ನಿಟ್ಟಿನಲ್ಲಿ ಮತದಾನದ ಮಹತ್ವ, ಮತಗಟ್ಟೆಗಳ ಬಗ್ಗೆ ಮಾಹಿತಿ, ಮೂಲಭೂತ ಸೌಕರ್ಯಗಳು, ಹಾಗೂ ಅಗತ್ಯ ಸೇವೆಗಳ ಬಗ್ಗೆ ಮತದಾರರಿಗೆ ತಿಳಿಸಬೇಕು ಎಂದರು.

18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡಿ, ಹೊಸ ಮತದಾರರಾದಲ್ಲಿ ವೋಟಿಂಗ್ ಹೇಲ್ಸ್ ಲೈನ್ ಆಪ್ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿಯಾದ ಎಂ.ಶಾಂತ ಅವರು ಮಾತನಾಡಿ, ಶಾಲೆಗಳಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಪ್ರತೀ ಶಾಲೆಗಳಲ್ಲಿ 9 ನೇ ತರಗತಿಯಿಂದಲೇ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಮತದಾರರು ಅವರ ಮತವನ್ನು ಅವರೇ ಚಲಾಯಿಸಬೇಕು. ಮತದಾರರು ಮತಗಟ್ಟೆಗೆ ಯಾವುದೇ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಲು ಸ್ವಯಂ ಸೇವಕರು ಮತದಾರರಿಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಪಾಂಡು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರುದ್ರೇಶ್, ವಲಯ ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಪೋಷಕರು , ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags: