ಮೈಸೂರು : ನಗರದೆಲ್ಲೆ ನಡೆಯುತ್ತಿರುವ ಜೆಡಿಎಸ್ ಕಾರ್ಯಗಾರದಲ್ಲಿ ಭಾಗವಹಿಸಿದ ದೇವೇಗೌಡ, ಇದೇ ಸಂದರ್ಭದಲ್ಲಿ ನಗರದ ವಿವಿ ಮೊಹಲ್ಲಾದಲ್ಲಿರುವ ಜಿ.ಟಿ.ದೇವೇಗೌಡ ನಿವಾಸಕ್ಕೆ ಇಂದು(ಅಕ್ಟೋಬರ್ 20) ಅಚ್ಚರಿ ಭೇಟಿ ನೀಡಿದರು. ಈ ಮೂಲಕ ಜಿಟಿಡಿಯನ್ನು ಪಕ್ಷದಲ್ಲಿ ಹಿಡಿದಿಟ್ಟುಕೊಳ್ಳಲು ದೇವೇಗೌಡ ಈ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಇನ್ನು ಮನೆಗೆ ಬಂದ ಎಚ್.ಡಿ. ದೇವೇಗೌಡರನ್ನು ಜಿಟಿಡಿ ಕುಟುಂಬ ಪ್ರೀತಿಯಿಂದ ಬರ ಮಾಡಿಕೊಂಡಿದೆ.
ರಾಜಕೀಯ ನಿಲುವು ಪ್ರಕಟಿಸಿದ ಜಿಟಿಡಿ
ಎಚ್ಡಿಡಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಜೆಡಿಎಸ್ ಬಿಟ್ಟು ಹೋಗಲ್ಲ. ಎಲ್ಲ ಪಕ್ಷದವರೂ ನನ್ನನ್ನ ಕರೆದಿದ್ದಾರೆ, ದಯವಿಟ್ಟು ನನ್ನ ಕ್ಷಮಿಸಿ. ಕಾಂಗ್ರೆಸ್ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದು ಹೇಳಿದ್ದಾರೆ. ಆದರೆ ನಾವು JDS ಪಕ್ಷದಿಂದ ನಾವು ಬೆಳೆದಿದ್ದೇವೆ. ಜೆಡಿಎಸ್ ಪಕ್ಷವನ್ನ ಕಟ್ಟುವುದೇ ನಮ್ಮ ಗುರಿ ಎಂದ ಜಿಟಿಡಿ ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್, ಬಿಜೆಪಿ ಸೇರುವ ವದಂತಿಗಳಿಗೆ ತೆರೆ ಎಳೆದರು. ಅಲ್ಲದೇ ನಮ್ಮ ಪಕ್ಷಕ್ಕೆ ಬರ್ತಾರೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರೀ ನಿರಾಸೆಯಾಗಿದೆ.





