Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸ್ಪರ್ಧಾತ್ಮಕ ಪರೀಕ್ಷೆಗೆ ಆಸಕ್ತಿ ಮುಖ್ಯ : ಎ.ದೇವರಾಜು

ಮೈಸೂರು: ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಆಸಕ್ತಿ ಬಹಳ ಮುಖ್ಯ ಎಂದು ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಬ್ಯಾಂಕಿಂಗ್ ತರಬೇತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಠಿಣಾವಾಗಿದೆ. ಪರೀಕ್ಷೆ ಎದುರಿಸಲು ತಯಾರಿ ಜೊತೆಗೆ ಅಸಕ್ತಿ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಹಿಂದೆಲ್ಲಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಇರುತ್ತಿರಲಿಲ್ಲ. ಆದರೆ ಇತ್ತೀಚಿಗೆ ತುಂಬಾ ತರಬೇತಿ ಸಂಸ್ಥೆಗಳಿವೆ. ಆದರೆ ದುಬಾರಿ ಶುಲ್ಕ ವಿದ್ಯಾರ್ಥಿಗಳಿಗೆ ಭರಿಸಲಾಗದೆ ತರಬೇತಿಗೆ ಪಡೆಯಲು ಆಗುತ್ತಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಮುಕ್ತ ವಿವಿಯ ತರಬೇತಿ ಬಹಳ ಪ್ರಯೋಜನಕಾರಿಯಾಗಿದೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಶ್ರದ್ದೆ ಹಾಗೂ ಸತತ ನಿರಂತರ ಪ್ರಯತ್ನದಿಂದ ತಮ್ಮ ಗುರಿ ಮುಟ್ಟುವ ತನಕ ಅಭ್ಯಾಸವನ್ನು ಸಮಸ್ಯೆಗೆ ಹೆದರಿ ನಿಲ್ಲಿಸಬಾರದು. ಜೊತೆಗೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಎಲ್ಲಾ ಪರೀಕ್ಷೆಗಳನ್ನು ಧೈರ್ಯವಾಗಿ ತೆಗೆದುಕೊಂಡು ಪರೀಕ್ಷೆಯನ್ನು ಹೆದರಿಸಿ ಎಂದು ಕಿವಿಮಾತು ಹೇಳಿದರು.

ಪರೀಕ್ಷೆ ಎದುರಿಸಲು ನಿಮ್ಮ ವೈಯಕ್ತಿಕ ಆಸಕ್ತಿ ಮುಖ್ಯವಾಗಿರಬೇಕೆ ಹೊರತು ಬೇರೆಯವರ ಒತ್ತಾಯಕ್ಕೆ ಓದಬಾರದು. ಪರೀಕ್ಷೆ ಬರೆಯುವವರೆಲ್ಲ ಪಾಸಾಗುವುದಿಲ್ಲ. 100 ಹುದ್ದೆಗೆ ಪರೀಕ್ಷೆ ನಡೆಸಿದರೆ ಸುಮಾರು 1 ಲಕ್ಷ ಜನರು ಪರೀಕ್ಷೆಯನ್ನು ಕೈಗೊಳ್ಳುತ್ತಾರೆ. ಅದರಲ್ಲಿ ಸತತವಾಗಿ ಅಭ್ಯಾಸ ನಡೆಸಿದವರಿಗೆ ಮಾತ್ರ ಕೆಲಸ ದೊರಕುತ್ತದೆ. ಆದ್ದರಿಂದ ನಿಮ್ಮ ಗುರಿ ಅಚಲವಾಗಿರಬೇಕು ಎಂದು ಹೇಳಿದರು.

ಪ್ರತಿಯೊಬ್ಬರೂ ಕೂಡ ನಿಮ್ಮ ಗುರಿಯನ್ನು ಪ್ರೀತಿಸಿ. ಎಲ್ಲರ ಬಳಿಯೂ ಮೊಬೈಲ್ ಇರುವುದರಿಂದ ಪ್ರಯಾಣ ಮಾಡುವಾಗ ಅಥವಾ ಇನ್ನಾವುದೇ ಸಮಯದಲ್ಲಿ ಪ್ರಚಲಿತ ಘಟನೆ, ನ್ಯೂಸ್ ಪೇಪರ್ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಿ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧೆಗಳು ಹೆಚ್ಚಿದೆ. ಆದರೂ ಸಹ ಯಾರು ಎದೆಗುಂದದೆ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಡಿ ‘ಪ್ರಯತ್ನ ಪಟ್ಟರೆ ಪರಮಾತ್ಮನೇ ಸಿಗುವನು’ ಎಂಬ ಮಾತಿನಂತೆ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮ ಗುರಿಯನ್ನು ಮುಟ್ಟಬಹುದಾಗಿದೆ ಎಂದರು.

ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಇಂದು ಕಷ್ಟಪಟ್ಟರೆ ಮುಂದಿನ ನಿಮ್ಮ ಜೀವನ ಸುಖಕರವಾಗಿರುತ್ತದೆ. ಜೊತೆಗೆ ಸಮಾಜದಲ್ಲಿ ಉನ್ನತ ಗೌರವಗಳು ದೊರಕುತ್ತದೆ. ಎಲ್ಲಾ ಅಭ್ಯರ್ಥಿಗಳಿಗೂ ಓದಿನ ಹಸಿವಿರಬೇಕು. ಕಲಿಕೆ ಎಂಬುದು ದಿನನಿತ್ಯದ ಪಯಣವಾಗಿದೆ. ಎಲ್ಲರೂ ಉತ್ತಮ ಶ್ರದ್ದೆಯಿಂದ ಕಲಿಕೆಯನ್ನು ಮುಂದುವರಿಸಿ ಎಂದು ತಿಳಿಸಿದರು.

Tags:
error: Content is protected !!