ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತವನ್ನು ವಿರೋಧ ಮಾಡಲು ಯಾವ ವಿಷಯವೂ ಇಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಮೂಡಾ ಹಗರಣ ಸೃಷ್ಟಿಸಿ ಸಿಎಂ ವಿರುದ್ಧ ಇಲ್ಲಾಸಲ್ಲದ ಆರೋಪ ಮಾಡಿದರೆ ದಲಿತರು ಕೈಕಟ್ಟಿ ಕೂರುವುದಿಲ್ಲ ಎಂದು ನಗರದ ಮಾಜಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಅಜಯ್ ಸಿದ್ದರಾಜು ಎಚ್ಚರಿಸಿದರು.
ಸಿದ್ದರಾಮಯ್ಯ ಅವರ ದಕ್ಷ ಆಡಳಿತ ಮತ್ತು ಜನಪ್ರಿಯತೆ ಸಹಿಸಲಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬಾಲಸುಟ್ಟ ಮಂಗನಂತೆ ಆಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತ ರಾಜ್ಯದ ಮನೆಮನೆಗೂ ತಲುಪಿರುವುದನ್ನು ಸಹಿಸದ ಸಂವಿಧಾನ ವಿರೋಧಿಗಳು ಸುಳ್ಳು ಹೇಳಿಕೊಂಡು ಬೀದಿ ಸುತ್ತುತ್ತಿದ್ದಾರೆ. ಇವರ ಸುಳ್ಳಿಗೆ ಸೊಪ್ಪಾಕದೆ ದಲಿತ ಸಮುದಾಯ ಎಚ್ಚರ ವಹಿಸಬೇಕೆಂದು ಅಜಯ್ ತಿಳಿಸಿದರು.
ದಲಿತ ವರ್ಗದ ಪರ ಸಿಎಂ ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತವಾದುದು. ಅವರ ಅಧಿಕಾರಾವಧಿಯಲ್ಲಿ ದಲಿತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕಾರ್ಯಕ್ರಮಗಳನ್ನು ನೀಡಿದ್ದಾರೆ. ದಲಿತ ಸಮುದಾಯದ ಮೇಲಿನ ಪ್ರಾಮಾಣಿಕ ಕಾಳಜಿಯ ಕಾರಣಕ್ಕಾಗಿಯೇ ರಾಜ್ಯದಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದರು. ದಲಿತರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಿರುವ ಮುಖ್ಯಮಂತ್ರಿಯವರ ಕೈ ಬಲಪಡಿಸುವುದರ ಜೊತೆಗೆ ಅವರ ಬೆನ್ನಿಂದೆ ದಲಿತ ಸಮುದಾಯ ನಿಲ್ಲುತ್ತದೆ ಎಂದು ತಿಳಿಸಿದರು.
ಬಿಜೆಪಿಯವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಮುಖ್ಯಮಂತ್ರಿಗಳಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು ಮತ್ತು ಒಂದು ವೇಳೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ ದಲಿತರು ರಾಜ್ಯದಲ್ಲಿ ದಂಗೆ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದ ಅವಧಿಯಲ್ಲಿ ನಡೆದಿರುವ ಮೂಡ ಹಗರಣವನ್ನು ಸಿದ್ದರಾಮಯ್ಯನವರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಅವರು ನಡೆಸುತ್ತಿರುವ ಪಾದಯಾತ್ರೆ ಕೇವಲ ಫೋಟೋಶೂಟ್ ಮತ್ತು ಸೆಲ್ಫಿ ತೆಗೆದುಕೊಳ್ಳಲು ನಡೆಯುತ್ತಿರುವ ಹೋರಾಟವೇ ಹೊರತು ಬೇರೇನಿಲ್ಲ ಎಂದು ತಿಳಿಸಿದರು