Mysore
19
overcast clouds
Light
Dark

ಅಧಿಕಾರಿಗಳನ್ನು ಎಚ್ಚರಿಸಲೆಂದೆ ಪಾದಯಾತ್ರೆ ಕೈಗೊಂಡಿದ್ದೇನೆ: ಶಾಸಕ ಹರೀಶ್ ಗೌಡ

ಮೈಸೂರು: ಎಷ್ಟೋ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದು ಹೇಳಿದ್ದರೂ ಸಮಸ್ಯೆ ಬಗೆಹರಿದಿರುವುದಿಲ್ಲ. ಅಂತ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಕ್ಕಾಗಿಯೇ ಪಾದಯಾತ್ರೆ ನಡೆಸುತ್ತಿರುವುದಾಗಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ತಿಳಿಸಿದರು.

ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು “ಜನರ ಮನೆ ಬಾಗಿಲಿಗೆ ಶಾಸಕರು” ಎಂಬ ವಿನೂತನ ಹೆಸರಿನಡಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ. 5 -ಕುಂಬಾರಕೊಪ್ಪಲು ಶ್ರೀ ಆದಿಶಕ್ತಿ ದೇವಾಲಯದಿಂದ ಮುಂಜಾನೆಯೇ ಪಾದಯಾತ್ರೆ ಪ್ರಾರಂಭಿಸಿ ಅವರು ಮಾತನಾಡಿದರು.

ರಸ್ತೆ, ಯುಜಿಡಿ, ಒಳಚರಂಡಿ, ಉದ್ಯಾನವನ, ಕುಡಿಯುವ ನೀರು, ಖಾತೆ, ಕಂದಾಯ, ಸ್ವಚ್ಛತೆ, ಪಿಂಚಣಿ ಹಾಗೂ ಇನ್ನತರೆ ಅನೇಕ ಸಮಸ್ಯೆಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಆಲಿಸುವುದಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಆದರೆ, ಈ ಹಿಂದೆಯೂ ಅನೇಕ ಮಂದಿ ಅರ್ಜಿ ಕೊಟ್ಟಿದ್ದಾರೆ. ಅನೇಕ ಮುಖಂಡರು, ಬ್ಲಾಕ್ ಅಧ್ಯಕ್ಷರ ಮುಖೇನ ಮನವಿ ಸಲ್ಲಿಸಿದ್ದಾರೆ. ಇದಾದ ಬಳಿಕ ನಾವು ಸೂಚಿಸಿದ ಬಳಿಕ ಸಮಸ್ಯೆ ಇತ್ಯರ್ಥ ಆಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಪಾದಯಾತ್ರೆ ವೇಳೆ ಜನತೆ ನೇರವಾಗಿ ಈ ಹಿಂದೆ ಮನವಿ ಮಾಡಿದ್ದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿರುವ ಬಗ್ಗೆ ಹೇಳಿಕೊಂಡಾಗ ಆಗ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಕ್ಕೆ ಎಚ್ಚರಿಕೆ ನೀಡಲು ಪಾದಯಾತ್ರೆಯಿಂದ ಮಾತ್ರ ಸಾಧ್ಯ ಎಂದು ನಿರ್ಧರಿಸಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.

ಇನ್ನೂ ಸಾಕಷ್ಟು ಸಮಸ್ಯೆಗಳಿರುವ ಕಾರಣಕ್ಕಾಗಿ ಪಾಲಿಕೆ ಅಧಿಕಾರಿಗಳು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಚೆಸ್ಕಾಂ, ಕೆ.ಎಸ್.ಆರ್.ಟಿ.ಸಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳ ಜತೆಗೂಡಿ ಪಾದಯಾತ್ರೆ ನಡೆಸುತ್ತಿದ್ದೇನೆ. ಅನೇಕರಿಗೆ ನನ್ನನ್ನು ಖುದ್ದು ಭೇಟಿ ಮಾಡಲು ಅಥವಾ ನನ್ನ ಕಚೇರಿಗೆ ಬಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗದಿರಬಹುದು. ಅಂತಹವರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುವ ಕೆಲಸ ಪ್ರಮುಖವಾಗಿ ಮಾಡುವ ಉದ್ದೇಶದಿಂದ ಪಾದಯಾತ್ರೆ ನಡೆಸುತ್ತಿದ್ದೇನೆ. ಮಾತ್ರವಲ್ಲದೆ, ವಾರ್ಡ್ ನ ಪ್ರಮುಖ ಸ್ಥಳದಲ್ಲಿ ಬೆಳಿಗ್ಗೆ ಪಾದಯಾತ್ರೆ ಹಾಗೂ ಜನ ಸಂಪರ್ಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗುವುದು. ಸದರಿ ಪಾದಯಾತ್ರೆ ಪ್ರತಿ ವಾರ ಒಂದೊಂದು ವಾರ್ಡ್ ನಲ್ಲಿ ನಡೆಸಲು ಉದ್ದೇಶಿಸಿರುತ್ತೇನೆ. ಪಕ್ಷಾತೀತವಾಗಿ ಜನರು ಸಮಸ್ಯೆ ಹೇಳಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಇನ್ನೂ ಕ್ಷೇತ್ರದಲ್ಲಿ ಆಗಿರುವ ಕಾಮಗಾರಿ ಹಾಗೂ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡುವ ನಿಟ್ಟಿನಲ್ಲಿಯೂ ಪಾದಯಾತ್ರೆ ವೇಳೆ ಪರಿಶೀಲನೆ ಮಾಡುತ್ತಿರುವುದಾಗಿ ಹೇಳಿದರು.

ಕುಂಬಾರಕೊಪ್ಪಲಿನ ಕಾವೇರಿ ಬಡಾವಣೆ, 60 ಅಡಿ ರಸ್ತೆ, ಬಸ್ಸ ಬೀದಿ ಮುಖ್ಯ ರಸ್ತೆ, ಲಾರಿ ಬೈರಪ್ಪನವರ ಮನೆ ರಸ್ತೆ ಬೆಳ್ಳಗ್ಗೆ ಪಾದಯಾತ್ರೆ ನಡೆಸಿದರು. ಸಂಜೆ ಕುಂಬಾರ ಕೊಪ್ಪಲು ಕ್ರೀಡಾಂಗಣ, ಕುಂಬಾರಕೊಪ್ಪಲು ಕಾಲೋನಿ ಹಾಗೂ ಮಹದೇಶ್ವರ ದೇವಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಯನ್ನು ಖುದ್ದು ಆಲಿಸಿದರು.

ಪಾದಯಾತ್ರೆಯಲ್ಲಿ ನಗರಪಾಲಿಕೆ ಆಯುಕ್ತರು ಹಾಗೂ ಪ್ರಮುಖ ಇಲಾಖೆಯ ಅಧಿಕಾರಿಗಳು ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.