Mysore
20
overcast clouds
Light
Dark

ಎನ್‌ಡಿಎ ಅಭ್ಯರ್ಥಿಗಾಗಿ ನಾನು ಗೆದ್ದ ಸೀಟನ್ನೇ ಬಿಟ್ಟುಕೊಟ್ಟಿದ್ದೇನೆ: ಸುಮಲತಾ ಅಂಬರೀಶ್‌

ಮೈಸೂರು: ನಾನು ಮಂಡ್ಯ ಹಾಲಿ ಸಂಸದೆಯಾಗಿದ್ದು, ಎನ್‌ಡಿಎ ಅಭ್ಯರ್ಥಿಗೆ(ಮೈತ್ರಿ ಅಭ್ಯರ್ಥಿ ಎಚ್‌.ಡಿ ಕುಮಾರಸ್ವಾಮಿ) ನನ್ನ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸೇರಿದ್ದೇನೆ. ಇದರ ಅರ್ಥ ಮೈತ್ರಿಕೂಟದ ಅಭ್ಯರ್ಥಿಗೆ ನನ್ನ ಸಂಪೂರ್ಣ ಸಹಕಾರ ಇದ್ದಂತೆ ಎಂದಿರುವ ಸಂಸದೆ ಸುಮಲತಾ ಅಂಬರೀಶ್, ಆ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತನ್ನ ಬೆಂಬಲವಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ಸಂಬಂಧ, ವಾರದ ಹಿಂದೆಯಷ್ಟೇ ಬಿಜೆಪಿ ಸೇರಿದ್ದೇನೆ. ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಲು ಹೇಳುತ್ತದೆಯೋ ಅಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

ನಾನು ಗೆದ್ದಿರುವ ಸೀಟನ್ನು ಮೈತ್ರಿ ಅಭ್ಯರ್ಥಿಗೆ ಬಿಟ್ಟುಕೊಟ್ಟಾಗಲೇ ಸಹಕಾರ ಕೊಟ್ಟಿದ್ದೇನೆ ಎಂದರ್ಥ. ಯಾರೂ ತಾವು ಗೆದ್ದಿರುವ ಸೀಟನ್ನು ಬಿಟ್ಟು ಕೊಡಲ್ಲ. ನಾನು ಬಿಟ್ಟು ಕೊಟ್ಟಿದ್ದೇನೆ. ನಾನು ಯಾವಾಗ ಬಿಜೆಪಿ ಪಕ್ಷ ಸೇರ್ಪಡೆಯಾದೆ, ಆವಾಗಲೇ ಎನ್‌ಡಿಎ ಅಭ್ಯರ್ಥಿ ಪರ ಇದ್ದೇನೆ ಎಂದರ್ಥ ಎಂದು ಸಂಸದೆ ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಕಳೆದ ಒಂದು ದಿನದಿಂದ ನಾನು ಈ ವಿಚಾರವನ್ನ ಗಮನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಫೋಟೋಗಳು ಹರಿದಾಡುತ್ತಿವೆ. ಈಗಾಗಲೇ ಆಕೆಯನ್ನು ಹತ್ಯೆ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಚಾರಿತ್ರ್ಯವನ್ನು ಹತ್ಯೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.