ಮೈಸೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ನಿನ್ನೆ ( ಮಾರ್ಚ್ 13 ) ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಗೊಳಿಸಿದೆ. ಮೈಸೂರು – ಕೊಡಗು ಕ್ಷೇತ್ರದ ಟಿಕೆಟ್ ಅನ್ನು ಯದುವೀರ್ ಒಡೆಯರ್ ಅವರಿಗೆ ನೀಡಲಾಗಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದೆ.

ಇನ್ನು ಟಿಕೆಟ್ ಘೋಷಣೆಯಾಗುವ ಮುನ್ನವೇ ಟಿಕೆಟ್ ಯಾರಿಗೆ ಸಿಕ್ಕರೂ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ಘೋಷಿಸಿದ್ದ ಪ್ರತಾಪ್ ಸಿಂಹ ಟಿಕೆಟ್ ಕೈತಪ್ಪಿದ ಬಳಿಕವೂ ಸಹ ಅದೇ ಮಾತುಗಳನ್ನು ಆಡಿದ್ದರು. ಇನ್ನು ಇಂದು ( ಮಾರ್ಚ್ 14 ) ಈ ಕುರಿತಾಗಿ ಮತ್ತೊಂದು ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ “ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ ಮಾಡುವುದು ಎಂದು ಅಂಜಬೇಡಿ, ಈಗಲೂ ಮತ್ತು ಮಾಜಿಯಾದ ಮೇಲೂ ಕೈಲಾದ ಕೆಲಸ ಮಾಡಿಕೊಡುತ್ತೇನೆ. ಸೋಮವಾರದಿಂದ ಪ್ರಚಾರ ಕಾರ್ಯಕ್ಕೆ ಬರುತ್ತೇನೆ” ಎಂದು ಬರೆದುಕೊಂಡಿದ್ದಾರೆ.





