ಮೈಸೂರು: ಕುಡಿತದ ಚಟಕ್ಕೆ ದಾಸನಾಗಿ ಕೆಲಸಕ್ಕೆ ಹೋಗದ ಪತಿಗೆ ಬುದ್ಧಿವಾದ ಹೇಳಿದ ಪತ್ನಿ ಮೇಲೆ ಬಿಸಿ ಸಾಂಬಾರ್ ಸುರಿದ ಘಟನೆ ಮೈಸೂರಿನ ಹಿನಕಲ್ನಲ್ಲಿ ನಡೆದಿದೆ.
ಗಾಯಗೊಂಡ ಪತ್ನಿ ಮಂಗಳಮ್ಮ ಅವರಿಗೆ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮೀಪದಲ್ಲೇ ಇದ್ದ ಮಗಳು ಸುಮತಿಗೂ ಸುಟ್ಟಗಾಯಗಳಾಗಿದೆ.
ಮೂಲತಃ ನಂಜನಗೂಡು ನಿವಾಸಿಗಳಾದ ರಾಜು ಹಾಗೂ ಮಂಗಳಮ್ಮ ಜೀವನೋಪಾಯಕ್ಕಾಗಿ ೪ ತಿಂಗಳ ಹಿಂದೆ ಮೈಸೂರಿಗೆ ಬಂದು ಹಿನಕಲ್ನಲ್ಲಿ ನೆಲೆಸಿದ್ದರು. ಕುಡಿತದ ಚಟಕ್ಕೆ ದಾಸನಾಗಿದ್ದ ರಾಜು ಕೆಲಸಕ್ಕೆ ಹೋಗುತ್ತಿರಲಿಲ್ಲ.
ಕಳೆದ ಎರಡು ದಿನಗಳ ಹಿಂದೆ ಕೆಲಸ ಮುಗಿಸಿ ಮಂಗಳಮ್ಮ ಮನೆಗೆ ಹಿಂದಿರುಗಿದಾಗ ರಾಜು ಮನೆಯಲ್ಲೇ ಕುಡಿದು ಬಿದ್ದಿದ್ದ ಎನ್ನಲಾಗಿದೆ. ಕೆಲಸಕ್ಕೆ ಹೋಗಲಿಲ್ಲ ಎಂದರೆ ಸಂಸಾರ ಹೇಗೆ ನಡೆಯುತ್ತದೆ. ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದು ಪತಿಗೆ ಬುದ್ಧಿವಾದ ಹೇಳಿದ್ದಾರೆ.
ಇಷ್ಟಕ್ಕೇ ಸಿಟ್ಟಿಗೆದ್ದ ರಾಜು ನೀನು ಇದ್ದರೆ ತಾನೆ ಕೆಲಸಕ್ಕೆ ಹೋಗು ಎನ್ನುತ್ತೀಯ. ನನ್ನ ಸಂಪಾದನೆಯಲ್ಲಿ ನಾನು ಕುಡಿಯುತ್ತೇನೆ ಎಂದು ಅರಚಾಡಿದ್ದಾನೆ. ನಂತರ ಒಲೆ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಎತ್ತಿ ಮಂಗಳಮ್ಮ ಮೇಲೆ ಸುರಿದಿದ್ದಾನೆ. ಈ ವೇಳೆ ಪಕ್ಕದಲ್ಲಿದ್ದ ಮಗಳು ಸುಮತಿ ಮೇಲೂ ಸಾಂಬಾರ್ ಚೆಲ್ಲಿದೆ. ಗಾಯಗೊಂಡ ತಾಯಿ, ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳಮ್ಮ ಅವರು ವಿಜಯನಗರ ಠಾಣೆಯಲ್ಲಿ ರಾಜು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





