ಹುಣಸೂರು: ಮೈಸೂರು ಜಿಲ್ಲಾ ಭಾಗದಲ್ಲಿ ರಾಗಿ ಬೆಳೆ ಬೆಳೆದು 2-3 ತಿಂಗಳಾದರೂ ಕೂಡ ಸಕಾಲದಲ್ಲಿ ರಾಗಿ ಕೇಂದ್ರವನ್ನು ತೆರೆಯದ ಕಾರಣ ರೈತರು ತಾವು ಬೆಳೆದಿರುವ ರಾಗಿಯನ್ನು ದಲ್ಲಾಳಿಗಳ ಪಾಲು ಮಾಡುತ್ತಿದ್ದಾರೆ. ಇನ್ನಾದರೂ ರಾಗಿ ಕೇಂದ್ರವನ್ನು ಶೀಘ್ರವಾಗಿ ತೆರೆಯಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಖರೀದಿ ಕೇಂದ್ರದಲ್ಲಿ ಕೆಲವು ಅಧಿಕಾರಿಗಳು ದಲ್ಲಾಳಿಗಳ ಜೊತೆ ಶಾಮೀಲಾಗುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ರೈತ ಸಂಘ ಹಾಗೂ ದಸಂಸ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರಾಜ್ಯ ಮಹಿಳಾ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಉಪಾಧ್ಯಕ್ಷ ಆಲಿಜಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಜಿಲ್ಲಾ ಖಜಾಂಚಿ ಈಶ್ವರ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಅರಸ್, ಜಿಲ್ಲಾ ಪದಾಧಿಕಾರಿ ಬಸವರಾಜೇಗೌಡ, ಹೆಚ್.ಡಿ.ಕೋಟೆ ರೈತ ಸಂಘದ ಅಧ್ಯಕ್ಷ ಮಹದೇವನಾಯಕ, ಕೆ.ಆರ್.ನಗರ ರೈತ ಸಂಘದ ಅಧ್ಯಕ್ಷ ಮಲ್ಲೇಶ್, ದಸಂಸ ಮುಖಂಡರಾದ ಅತ್ತಿಕುಪ್ಪೆ ರಾಮಕೃಷ್ಣ, ಸಿದ್ದೇಶ್, ಪ್ರಕಾಶ್, ಚಿಕ್ಕಹುಣಸೂರು ರಾಜು, ನಾರಾಯಣ್, ಗಿರೀಶ್, ರವಿನಾಯಕ್, ಟಿ.ಎಂ. ಮೌನೇಶ್, ಶಿವರಾಜ್, ಮುಂತಾದವರು ಭಾಗವಹಿಸಿದ್ದರು.




