ಹುಣಸೂರು: ಜಾತಿ ನಿಂದನೆ ಮಾಡಿ, ದಲಿತ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ, ತಹಸಿಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಹುಣಸೂರು ತಾಲ್ಲೂಕು ಹನಗೋಡು ಹೋಬಳಿಯ ರಾಮೇನಹಳ್ಳಿ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಹುಣಸೂರು ತಾಲ್ಲೂಕು ನಿಲುವಾಗಿಲು ಗ್ರಾಮದ ಸುಭಾಷ್ ಮತ್ತು ಆತನ ಕುಟುಂಬದವರು ಜಾತ್ರೆ ನೋಡಲು ಹೋಗಿದ್ದ ವೇಳೆ ನಿಲುವಾಗಿಲು ಗ್ರಾಮದ ಉಲ್ಲಾಸ್, ಚಿರಾಗ್, ಸೂರಿ, ಶಶಾಂಕ್ ಇತರೆ ಏಳು ಜನರು ದಲಿತ ಕುಟುಂಬದ ಹೆಣ್ಣು ಮಕ್ಕಳನ್ನು ಚುಡಾಯಿಸಿ, ಜಾತಿನಿಂದನೆ ಮಾಡಿ, ದಲಿತ ಹೆಣ್ಣು ಮಕ್ಕಳನ್ನು ಎಳೆದಾಡಿ, ಹಲ್ಲೆ ನಡೆಸಿದ್ದು, ಗಾಯಗೊಂಡವರು ಹುಣಸೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಭಾಷ್ ಎಂಬ ದಲಿತ ಹುಡುಗ ಇದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಮೊಬೈಲ್ಅನ್ನು ಕಿತ್ತುಕೊಂಡು ಸುಭಾಷ್ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಹಲ್ಲೆ ಮಾಡಿದವರ ಮೇಲೆ ಜಾತಿ ದೌರ್ಜನ್ಯದ ಕಾಯಿದೆ ಅಡಿ ಕೇಸು ದಾಖಲಿಸಿ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನೊಂದ ಗಾಯಾಳುಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಬೆಳ್ತೂರು ವೆಂಕಟೇಶ್, ವಿ.ಬಸವರಾಜು ಕಲ್ಕುಣಿಕೆ, ಶಿವರಾಮು ಹೆಚ್.ಎಸ್.ಮಹದೇವು ತಮ್ಮಡಹಳ್ಳಿ, ಸಂತೋಷ್, ರಾಜು, ಸಿದ್ದರಾಜು, ಲೋಕೇಶ್ ನಿಲುವಾಗಿಲು, ಮಹದೇವ ಬನ್ನಿಕುಪ್ಪೆ, ಯಶವಂತ್, ಕಿಶೋರ್, ಅವಿನಾಶ್, ವೈ.ರಾಜು ಹಾಗೂ ನಿಲುವಾಗಿಲು ಗ್ರಾಮಸ್ಥರು ಹಾಜರಿದ್ದರು.





