ಸ್ನೇಹಿತನಿಗೆ ಇರಿತ; ಮಗ, ತಾಯಿ ಬಂಧನ
ಹುಣಸೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಕುಪಿತಗೊಂಡು ತನ್ನ ಸ್ನೇಹಿತನಿಗೆ ಬಿಯರ್ ಬಾಟಲಿಯಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿ ಬಳಿಯ ಶಾರದ ಸರ್ವೀಸ್ ಸ್ಟೇಷನ್ನಲ್ಲಿ ನಡೆದಿದೆ.
ಹಳೇಬೀಡು ಗ್ರಾಮದ ಚೆಲುವರಾಜು ಅವರ ಪುತ್ರ ಅನಿಲ್ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅನಿಲ್ ಮತ್ತು ಈತನ ಸ್ನೇಹಿತ ಅಭಿಲಾಷ್ ಶಾರದ ಸರ್ವೀಸ್ ಸ್ಟೇಷನ್ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಭಿಲಾಷ್ನ ಪತ್ನಿ ೬ ತಿಂಗಳ ಹಿಂದೆ ಗಂಡನನ್ನು ತೊರೆದಿದ್ದಳು. ಇದಕ್ಕೆ ಸ್ನೇಹಿತ ಅನಿಲ್ನೇ ಕಾರಣ ಎಂದು ಆಕ್ರೋಶಿತನಾಗಿದ್ದ ಅಭಿಲಾಷ್ ಮಂಗಳವಾರ ಸರ್ವೀಸ್ ಸ್ಟೇಷನ್ಗೆ ತಾಯಿಯೊಂದಿಗೆ ಆಗಮಿಸಿ ಏಕಾಏಕಿ ಬಿಯರ್ ಬಾಟಲಿಯಿಂದ ಅನಿಲ್ನ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾನೆ. ತೀವ್ರ ಅಸ್ಪಸ್ಥನಾದ ಆತನನ್ನು ಸ್ಥಳದಲ್ಲಿದ್ದವರು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಹುಣಸೂರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬೆನ್ನಟ್ಟಿದ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಂಡ ಮೈಸೂರು ಬಳಿಯ ನಾಗವಾಲದಲ್ಲಿ ಆರೋಪಿಗಳಾದ ಕಾಡನಕೊಪ್ಪಲಿನ ಶಿವರಾಂ ಪುತ್ರ ಅಭಿಲಾಷ್ ಹಾಗೂ ಈತನ ತಾಯಿ ಲಕ್ಷ್ಮಮ್ಮ ಅವರನ್ನು ವಶಕ್ಕೆ ಪಡೆದಿದ್ದಾರೆ.





