Mysore
21
overcast clouds
Light
Dark

ಉಪನ್ಯಾಸಕರ ಸೇವೆಯಲ್ಲಿ ಮುಂದುವರಿಸಿ: ಅತಿಥಿ ಉಪನ್ಯಾಸಕರ ಅಹೋರಾತ್ರಿ ‍ಪ್ರತಿಭಟನೆ!

ಮೈಸೂರು: ದಶಕದಿಂದಲೂ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಸೋಮವಾರ ಅಹೋರಾತ್ರಿ ‍ಪ್ರತಿಭಟನೆ ನಡೆಸಿದರು.

ಇಲ್ಲಿನ ಕ್ರಾಫರ್ಡ್‌ ಭವನದ ಎದುರು ಜಮಾಯಿಸಿದ ಮೈಸೂರು ವಿವಿ ಅತಿಥಿ ಉಪನ್ಯಾಸಕರು, ಪ್ರತಿಭಟನಕಾರರು, ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಪಾಪಣ್ಣ ಮಾತನಾಡಿ, ‘ಹತ್ತಾರು ವರ್ಷದಿಂದ ಅರ್ಹತೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಮೂರ್ನಾಲ್ಕು ಸಂದರ್ಶನ ನೀಡಿಯೇ ನೌಕರಿ ಮುಂದುವರಿಸಿದ್ದೇವೆ. ಈಗ ಮರು ಸಂದರ್ಶನ ಮಾಡಿ ಅವಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ನೆಟ್‌, ಕೆ–ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದವರು, ಪಿಎಚ್‌ಡಿ ಪದವಿ ಪಡೆದ 600ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಎಲ್ಲರನ್ನೂ ಮುಂದುವರಿಸಬೇಕು. ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲವೂ ಅವರನ್ನು ತೆಗೆದುಹಾಕಿ, ಅವರಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಿ. ಆದರೆ, ಎಲ್ಲರನ್ನೂ ಒಂದೇ ಎಂದು ಪರಿಗಣಿಸಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ದಿನಮಣಿ, ರಾಘವೇಂದ್ರ, ಕಾರ್ಯದರ್ಶಿ ಹರ್ಷ, ಅತಿಥಿ ಉಪನ್ಯಾಸಕರಾದ ಡಾ. ಕೆ.ಪಿ ರಮೇಶ್‌ ಹಾಜರಿದ್ದರು.