Mysore
19
overcast clouds
Light
Dark

ದೇಶದ ಅಭಿವೃದ್ಧಿ ಗ್ಯಾರಂಟಿಗೆ ಮತ ನೀಡಿ: ಎಂ ಲಕ್ಷ್ಮಣ್‌

ಮೈಸೂರು: ರಾಜ್ಯ ಕಾಂಗ್ರೆಸ್‌ನ ಗ್ಯಾರಂಟಿಯಷ್ಟೆ ನಿಮ್ಮ ಸೇವಕನಾಗಿ ಕೆಲಸ ಮಾಡಿಕೊಡುತ್ತೇನೆ, ನನಗೊಂದು ಅವಕಾಶ ಕೊಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ್‌ ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿ, ಸಿದ್ದಲಿಂಗಪುರ, ಕೆ.ಆರ್.ಮಿಲ್ ಕಾಲೋನಿ, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯಾ, ಆಲನಹಳ್ಳಿ ಹಾಗೂ ಹೊಸುಂಡಿ ಗ್ರಾಮಗಳಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಜತೆಗೂಡಿ ಮತಯಾಚನೆ ಮಾಡಿದರು.

ಬಳಿಕ ಮಾತನಾಡಿ, ಜನಪರ ಯೋಜನೆಗಳನ್ನು ನೀಡುವ ವ್ಯವಸ್ಥೆ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ರಾಜ್ಯದಲ್ಲಿ ಬರಗಾಲ ಇದ್ದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಯಾಪೈಸೆ ಕೊಡಲಿಲ್ಲ. ಸೆಪ್ಟಂಬರ್‌ನಲ್ಲೇ ವರದಿ ಕೊಟ್ಟು ಮನವಿ ಮಾಡಿದರೂ ಸ್ಪಂದನೆ ಮಾಡಲಿಲ್ಲ. ಅವರು ಪುಕ್ಕಟ್ಟೆ ಕೊಡದಿದ್ದರೂ ನಮ್ಮ ರಾಜ್ಯದ ತೆರಿಗೆ ಹಣದಲ್ಲಿ ನ್ಯಾಯಯುತವಾಗಿ ನೀಡಬೇಕಾದ ಅನುದಾನ ನೀಡಲಿಲ್ಲ. ಬರೀ ಸುಳ್ಳು ಹೇಳಿಕೊಂಡೆ ತಿರುಗಾಡುವ ಕೆಲಸ ಮಾಡುತ್ತಾರೆ. ಆದುದರಿಂದ ಜನತೆ ಅರ್ಥ ಮಾಡಿಕೊಳ್ಳಬೇಕಿದೆ, ನಿಮ್ಮ ಮತ ಸುಳ್ಳು ಹೇಳುವವರ ವಿರುದ್ಧವಿರಬೇಕು. ಸದಾ ಜನಸೇವೆಯನ್ನೇ ಮಾಡುತ್ತಾ ಬಂದಿರುವ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಬಂದೂ ಕೋಮುವಾದದ ಮಾತುಗಳನಷ್ಟೇ ಆಡಿದ್ದು ಬಿಟ್ಟರೆ ಬೇರೆ ಎನೂ ಮಾಡಿಲ್ಲ. ಆದರೆ, ನಾನು ನಿಮಗೆ ಭರವಸೆ ನೀಡುತ್ತೇನೆ. ನನಗೆ ನೀವು ಹಾಕುವ ಮತಕ್ಕೆ ಐದು ವರ್ಷವೂ ನಿಮ್ಮ ಸೇವಕನಾಗಿ ನಿಮ್ಮ ಕೆಲಸ ಮಾಡುತ್ತೇನೆ. ದಯಾಮಾಡಿ ಒಂದು ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

22 ಸಾವಿರ ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ನೀಡಿದ್ದಾರೆ. ಜಿಲ್ಲೆಯ ಉತ್ತಮ ರಸ್ತೆಗಳಿಗೆ ಎಚ್.ಸಿ.ಮಹದೇವಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕೊಡುಗೆಯೇ ಕಾರಣವಾಗಿದೆ ಎಂದರು.