ಮೈಸೂರು : ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಮೊದಲ ತಂಡ ಈಗಾಗಲೇ ಮೈಸೂರು ನಗರಕ್ಕೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.
ಆ.10ರ ಭಾನುವಾರ ಸಂಜೆ 6.45ರಿಂದ 7.20ರ ವೇಳೆಗೆ ಗಜಪಡೆಯು ಅರಮನೆ ಪೂರ್ವ ದಿಕ್ಕಿನಲ್ಲಿರುವ ಜಯಮಾರ್ತಾಂಡ ದ್ವಾರದಿಂದ ಅರಮನೆ ಆವರಣ ಪ್ರವೇಶಿಸಲಿದೆ. ಈಗಾಗಲೇ ಅರಮನೆ ಆವರಣದಲ್ಲಿ ಆನೆಗಳು, ಮಾವುತರು, ಕಾವಾಡಿಗಳು ಮತ್ತವರ ಕುಟುಂಬಗಳ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ದಸರಾ ಗಜಪಯಣ ಕಾರ್ಯಕ್ರಮ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನತೆ ನೆರೆದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಆನೆಗಳ ಅರಮನೆ ಪ್ರವೇಶವನ್ನು ಆ.8ರಿಂದ ಆ.10ಕ್ಕೆ ಮುಂದೂಡಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಂದು ಭಾನುವಾರವಾಗಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರೂ ಗಜಪಡೆ ಅರಮನೆ ಆವರಣ ಪ್ರವೇಶಿಸುವುದನ್ನು ಕಣ್ತುಂಬಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದರು.
ಭಾನುವಾರ ಸಂಜೆ ಗಜಪಡೆ ಅರಮನೆ ಪ್ರವೇಶಿಸುವ ವೇಳೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಕಂಗೊಳಿಸಲಿದೆ. ದೀಪಾಲಂಕಾರದ ಸೌಂದರ್ಯದ ನಡುವೆಯೇ ಪ್ರವಾಸಿಗರಿಗೆ ಆನೆಗಳ ಅರಮನೆ ಆವರಣ ಪ್ರವೇಶದ ಸೊಬಗನ್ನು ಸವಿಯುವ ಅವಕಾಶ ಲಭಿಸುತ್ತದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದರು.





