Mysore
29
clear sky

Social Media

ಭಾನುವಾರ, 01 ಮಾರ್ಚ್ 2026
Light
Dark

ದ್ವೇಷ ಮರೆಯಿರಿ, ಪ್ರೀತಿ ಗಳಿಸಿ : ಡಿ.ಆರ್.ಪಾಟೀಲ್ ಕರೆ

ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ್ ಕರೆ ನೀಡಿದರು.

ತಾಲ್ಲೂಕಿನ ಬದನವಾಳು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭಾನುವಾರ ಭೇಟಿ ನೀಡಿ, ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಪ್ರೀತಿ, ದ್ವೇಷದ ಲಾಭ-ನಷ್ಟಗಳೆರಡನ್ನೂ ಕಂಡವರು ನೀವು. ಕೂಡಿ ಕೆಲಸ ಮಾಡಿ ಗ್ರಾಮದಲ್ಲಿ ಒಗ್ಗಟ್ಟು ಸಾಽಸಬೇಕು. ಬದನವಾಳನ್ನು ಮಾದರಿ ಗ್ರಾಮವಾಗಿಸಲು ನಾನೂ ನಿಮ್ಮ ಜೊತೆ ಕೈಜೋಡಿಸುತ್ತೇನೆ ಎಂದರು.

ಕೇಂದ್ರ ಸರ್ಕಾರ ಮ-ನರೇಗಾ ಯೋಜನೆಯನ್ನು ಮಾರ್ಪಾಡು ಮಾಡಿ ತಪ್ಪು ಮಾಡಿದೆ ಎಂದರು. ವರುಣ ಕ್ಷೇತ್ರದ ಪ್ರತಿ ಪಂಚಾಯಿತಿಗೂ ಆಶ್ರಯ ಮನೆ ನೀಡಲಾಗಿದೆ. ಆದರೆ ಬದನವಾಳಿಗೆ ಒಂದು ಮನೆಯನ್ನೂ ನೀಡಿಲ್ಲ ಎಂದು ಸಂವಾದದಲ್ಲಿ ಸದಸ್ಯರು ಆರೋಪಿಸಿದರು.

ಇದಕ್ಕೆ ಉತ್ತರ ನೀಡಲಾಗದ ಪಾಟೀಲರು, ಪ್ರತಿ ವಾರ್ಡ್‌ನಲ್ಲೂ ಗಾಂಧಿ ಗ್ರಾಮ ಸ್ವರಾಜ್ಯ ಬಳಗ ಕಟ್ಟಿ, ಕಡ್ಡಾಯವಾಗಿ ಗ್ರಾಮಸಭೆ ನಡೆಸಿ ಅಭಿವೃದ್ಧಿಗಾಗಿ ನೀವೇ ಯೋಜನೆ ರೂಪಿಸಿ, ಅದನ್ನು ಕಾರ್ಯಗತಗೊಳಿಸಿ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.

ಇದೇ ತಿಂಗಳ ಒಳಗಾಗಿ ಬಳಗ ರಚಿಸಿಕೊಳ್ಳಿ. ಚುನಾವಣೆಯ ಹಿಂದಿನ ಹಾಗೂ ಮುಂದಿನ ೧೫ ದಿನಗಳು ಮಾತ್ರ ಪಕ್ಷ ರಾಜಕಾರಣ. ನಂತರ ಏನಿದ್ದರೂ ಅಭಿವೃದ್ಧಿ ಹಾಗೂ ಒಗ್ಗಟ್ಟು ಇರಬೇಕು ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಭಾರತ್ ಜೋಡೋ ಯಾತ್ರೆಯನ್ನು ಬದನವಾಳಿಗೆ ಕರೆತರುವ ಮೂಲಕ ರಾಷ್ಟ್ರೀಯ ಭೂಪಟದಲ್ಲಿ ಬದನವಾಳನ್ನು ಮತ್ತೆ ಮೂಡಿಸಿದವರು ಮಾಜಿ ಸಂಸದ ದಿ.ಧ್ರುವನಾರಾಯಣ ಅವರು ಎಂದರು.

ಗುಡಿ ಕೈಗಾರಿಕೆಗೆ ಹೆಸರಾಗಿದ್ದ ಈ ಗ್ರಾಮದಲ್ಲಿ ಈಗ ಹೊಳೆ ನರಸೀಪುರದಿಂದ ಬಂದರೆ ಹತ್ತಿ ನೂಲು ಎಂಬ ಪರಿಸ್ಥಿತಿ ಇದ್ದು, ಇದು ಬದಲಾಗಬೇಕು ಎಂದರು. ಐದನೇ ಹಣಕಾಸು ಯೋಜನಾ ಸಮಿತಿಯ ಅಧ್ಯಕ್ಷ ನಾರಾಯಾಣ ಸ್ವಾಮಿ ಮಾತನಾಡಿ, ಗಾಂಧಿ ಅಂದು ಕಂಡ ಕನಸನ್ನು ನಾವು ನನಸು ಮಾಡಲು ಕಾರ್ಯೋನ್ಮುಖರಾಗೋಣ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ೪೦ ಕೋಟಿ ರೂ.ಗಳನ್ನು ಕ್ರಿಯಾಶೀಲ ಸಂಸದರಾಗಿದ್ದ ಧ್ರುವನಾರಾಯಣ ಅವರ ಮಗ ದರ್ಶನ್ ಅವರ ಕಾಲದಲ್ಲಿ ಸಮರ್ಪಕವಾಗಿ ಸದ್ವಿನಿಯೋಗವಾಗಬೇಕು. ಅಂಥ ಕ್ರಿಯಾಶಿಲತೆ ಅವರಲ್ಲಿದೆ ಎಂದರು.

 

Tags:
error: Content is protected !!