ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಗೆ ಸಲ್ಲಿಸಿದ ಒಂದು ದಿನದ ಬಳಿಕ ಯದುವೀರ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಮತ್ತು ಮೈಸೂರು ಅಭಿವೃದ್ಧಿಗಾಗಿ ಇದೇ ರೀತಿ ಬೆಂಬಲಿಸಿ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಏ.೩ ರಂದು ತಮ್ಮ ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ನಗರದ ಅರಮನೆ ಆವರಣದ ಕೋಟೆ ಆಂಜನೇಯ ದೇವಾಲಯದ ಮುಂಭಾಗದಿಂದ ರ್ಯಾಲಿಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಯದುವೀರ್ ಅವರಿಗೆ ಜೊತೆಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸಿ.ಎನ್ ಅಶ್ವಥ್ ನಾರಾಯಣ್ ಜೊತೆಯಾಗಿದ್ದರು.
ಈ ಸಂಬಂಧ ಇಂದು (ಏ.೪) ನಾಮಪತ್ರ ಸಲ್ಲಿಕೆಗೆ ಬೆಂಬಲ ಸೂಚಿಸಲು ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಬಿಜೆಪಿ ಹಾಗೂ ಜೆಡಿಎಸ್ ಮಖಂಡರಿಗೆ ಮತ್ತು ಮತಭಾಂದವರಿಗೆ ಕೃತಜ್ಞತೆಯನ್ನು ಸಮರ್ಪಿಸಿದ್ದಾರೆ.
ಚುನಾವಣೆಯಲ್ಲಿ ಇದೇ ರೀತಿ ಉತ್ಸಾಹವನ್ನು ತೋರಿದ್ದೇ ಆದಲ್ಲಿ ನಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಭಾಗವಹಿಸುವಿಕೆ ನಮಗೆ ಶಕ್ತಿ ತುಂಬಿದೆ. ಇದೇ ರೀತಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ಬೆಂಬಲ ನೀಡಿ ನನ್ನನ್ನು ಹಾರೈಸಿ ಎಂದು ಯದುವೀರ್ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ.