Mysore
19
few clouds
Light
Dark

ವನ್ಯಜೀವಿ ವಲಯದ ಸಿಬ್ಬಂದಿಗಳಿಗೆ ಉನ್ನತ ಅಧಿಕಾರಿಗಳಿಂದ ಬೆಂಕಿ ನಂದಿಸುವ ಬಗ್ಗೆ ತರಬೇತಿ ಶಿಬಿರ!

ಅಂತರಸಂತೆ: ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಮಗೆ ಈ ದೇಶದ ಸಂಪತ್ತನ್ನು ಉಳಿಸುವ ಜವಾಬ್ದಾರಿ ಇದೆ. ನಮ್ಮ ಸಂಪತ್ತನ್ನು ಉಳಿಸಿಕೊಳ್ಳಲು ನಾವು ಸ್ಥಳೀಯರ ಸಹಕಾರವನ್ನೂ ಪಡೆಯಬೇಕು. ಆದ್ದರಿಂದ ಕಾಡ್ಗಿಚ್ಚಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಜೆ.ಗಂಗಾನಾಯ್ಕ ತಿಳಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆಯ ಕಾಕನಕೋಟೆ ಸಫಾರಿ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ನಾಗರಹೊಳೆಯ ಅಂತರಸಂತೆ, ಮೇಟಿಕುಪ್ಪೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಸಿಬ್ಬಂದಿಗಳಿಗೆ ಬೆಂಕಿ ನಂದಿಸುವ ಬಗ್ಗೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಕಾಡಿಗೆ ಬೆಂಕಿ ಬೀಳದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಒಮ್ಮೆ ಕಾಡಿಗೆ ಬೆಂಕಿ ಬಿದ್ದರೆ ಅಲ್ಲಿನ ಜೀವ ಪರಿಸರ ಪುನರ್ ನಿರ್ಮಾಣವಾಗಲು ಕನಿಷ್ಠ ೧೫ವರ್ಷಗಳಾದರೂ ಬೇಕಾಗುತ್ತದೆ. ಆದ್ದರಿಂದ ಬೇಸಿಗೆಯ ಈ ೨-೩ ತಿಂಗಳುಗಳು ಕಾಡಿನ ರಕ್ಷಣೆಗೆ ನಾವು ಶ್ರಮಿಸಬೇಕಿದೆ.

ಜನರಲ್ಲಿನ ಅರಿವಿನ ಕೊರತೆಯಿಂದಾಗಿಯೂ ಕೆಲಬಾರಿ ಕಾಡಿಗೆ ಬೆಂಕಿ ಬೀಳುವ ಅಪಾಯವಿರುತ್ತದೆ. ರೈತರು ಜಮೀನುಗಳಲ್ಲಿ ಹಾಕುವ ಬೆಂಕಿ, ಬೀಡಿ ಸಿಗರೇಟಿನ ಬೆಂಕಿ ಕಿಡಿಗಳು ಕಾಡ್ಗಿಚ್ಚು ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಾವು ಕಾಡಂಚಿನ ಗ್ರಾಮಗಳಲ್ಲಿ ಜನರಿಗೆ ಕಾಡ್ಗಿಚ್ಚು ಹೇಗೆ ಸಂಭವಿಸುತ್ತದೆ. ಅದರ ಪರಿಣಾಮಗಳೇನು ಎಂಬುದರ ಬಗ್ಗೆ ಅರಿವು ಮೂಡಿಸಬೇಕು.

ಇತ್ತೀಚೆಗೆ ಕಾಡಿನ ಮೂಲಕ ಹಾದು ಹೋಗುವ ಮಾರ್ಗದಲ್ಲಿ ಸಂಚರಿಸುವ ಕೆಲ ವಿದ್ಯಾವಂತರೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಕಾಡಿನ ಮಧ್ಯೆ ವಾಹನ ನಿಲ್ಲಿಸಿ ಸಿಗರೇಟು ಸೇದು ಬೀಸಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕಾಡಿಗೆ ಅಪಾಯವಿದೆ. ಆದ್ದರಿಂದ ಅರಣ್ಯ ಇಲಾಖೆ ಅಂತಹವರಿಗೆ ಕಡಿವಾಣ ಹಾಕಬೇಕು. ಗೇಟ್ ಬಳಿಯೇ ಅವರನ್ನು ತಪಾಸಣೆ ಮಾಡಬೇಕು.

ಇನ್ನು ಬೆಂಕಿ ನಂದಿಸುವ ಸಾಧನ ಸಲಕರಣಗಳನ್ನು ಸಿದ್ಧವಾಗಿಟ್ಟುಕೊಂಡು, ಅಪಾಯ ಕಂಡಬಂದ ಸ್ಥಳಗಳಿಗೆ ಶೀಘ್ರವಾಗಿ ಸಾಗಿಸುವ ವ್ಯವಸ್ಥೆ ಮಾಡಿಕೊಂಡಿರಬೇಕು. ಜತೆಗೆ ಅಕ್ಕಪಕ್ಕದ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಬೇಕು.

ಕಾಡಿನ ರಕ್ಷಣೆಗಾಗಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ. ಅಕ್ಕಪಕ್ಕದ ಗ್ರಾಮದಲ್ಲಿರುವ ಮರಗಳ್ಳರು, ಕಾಡಿಗೆ ಅಪಾಯ ತಂದೊಡ್ಡಬಹುದಾದವವರು ಇದ್ದರ ಅವರ ಬಗ್ಗೆ ಹೆಚ್ಚಿನ ನಿಗಾ ಇಡುವುದು ಅತ್ಯಾವಶ್ಯಕ ಎಂದರು.

ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಗ್ನಿ ಶಾಮಕ ಇಲಾಖೆಯ ಸಾಧನೆಗಳನ್ನು ಬಳಸುವುದರ ಬಗ್ಗೆ ತರಬೇತಿ ನೀಡಿದರು.

ಈ ವೇಳೆ  ಎಸಿಎಫ್ ರಂಗಸ್ವಾಮಿ, ಮೈಸೂರು ಪ್ರಾದೇಶಿಕ ವಲಯದ ಎಸಿಎಫ್ ಲಕ್ಷ್ಮೀಕಾಂತ್, ಎಚ್.ಡಿ.ಕೋಟೆ ಎಸಿಎಫ್ ಅಭಿಷೇಕ್, ವಲಯ ಅರಣ್ಯಾಧಿಕಾರಿಗಳಾದ ಭರತ್ ತಳವಾರ್, ಮಧು, ಹನುಮಂತರಾಜು ಸೇರಿದಂತೆ ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ವಲಯದ ಡಿಆರ್‌ಎಫ್‌ಒಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಎಲ್ಲ ವಲಯದ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಎಲ್ಲಿ ಏನೇ ಅಪಾಯದ ಸೂಚನೆ ಸಿಕ್ಕರೂ ಪರಸ್ಪರ ಮಾಹಿತಿ ರವಾನಿಸುವುದು ಎಲ್ಲರ ಕರ್ತವ್ಯ. ಕಾಡಿನ ರಕ್ಷಣೆಯ ಜತೆಗೆ ನಮ್ಮ ರಕ್ಷಣೆಯೂ ಮುಖ್ಯವಾಗಿರುವುದರಿಂದ ಕಾಡಿನಲ್ಲಿ ಗುಂಪಿನಲ್ಲಿರುವುದು ಉತ್ತಮ. ಜತೆಗೆ ಅಗತ್ಯ ಸಲಕರಣಗಳನ್ನು ಬಳಸಿಕೊಂಡು, ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅಲ್ಲದೆ ನೀರಿನ ಮೂಲಗಳಿಗೆ ವಾಹನಗಳು ಹೋಗಿ ಬರಲು ಇರುವ ರಸ್ತೆಗಳು ಸೂಕ್ತವಾಗಿರುವಂತೆ ನೋಡಿಕೊಳ್ಳಬೇಕು.
-ರಂಗಸ್ವಾಮಿ, ಎಸಿಎಫ್, ಮೇಟಿಕುಪ್ಪೆ ಉಪವಿಭಾಗ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ