ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಏಕಾತ್ಮ ಮಾನವ ದರ್ಶನ: ಭಾರತದ ವಿಶ್ವದೃಷ್ಟಿ’ ಎಂಬ ಅಂತಾ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಉನ್ನತ ಶಿಕ್ಷಣ ಇಲಾಖೆ ಕೊನೆಯ ಕ್ಷಣದಲ್ಲಿ ರದ್ದುಪಡಿಸಿ ಆದೇಶ ಹೊರಡಿಸಿದ್ದರೂ ಸಂಘಟಕರು ಸರ್ಕಾರದ ಎಚ್ಚರಿಕೆಗೂ ಬಗ್ಗದೆ ಬುಧವಾರ ಶುರು ಮಾಡಿದ್ದಾರೆ.
ರಾಜ್ಯ ಸರ್ಕಾರ ನೀಡಿದ್ದ ಆದೇಶದ ಬಗ್ಗೆ ತಲೆ ಕೆಡಿಸಿಕೊಳ್ಳದ ಸಂಘಟಕರು ಸಿದ್ಧತೆ ಮಾಡಿಕೊಂಡಿದ್ದರಿಂದ ನಿರಾತಂಕವಾಗಿ ನಡೆಯುವಂತೆ ನೋಡಿಕೊಂಡರೆ, ಪೂರ್ವನಿಗದಿಯಂತೆ ರಾಜ್ಯಪಾಲ ಥಾವರ್ ಚಂದ್ ಗೆದ್ದೋಟ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಕ್ರಮಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಫೌಂಡೇಶನ್ ಅವರು ಆಯೋಜಿಸಿರುವ ಕಾರ್ಯಕ್ರಮಕ್ಕೂ, ಮುಕ್ತ ವಿವಿಗೂ ಸಂಬಂಧವಿಲ್ಲ. ಯಾವುದೇ ಸಹಯೋಗದೊಂದಿಗೆ ಧನಸಹಾಯ ನೀಡುತ್ತಿಲ್ಲವೆಂದು ಕುಲಪತಿಗಳು ಸ್ಪಷ್ಟನೆ ನೀಡಿದ್ದರು. ಹೀಗಿದ್ದರೂ ಮಂಗಳವಾರ ರಾತ್ರಿ ಸಮ್ಮೇಳನವನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದಾಗಿ ಕಾರ್ಯಕ್ರಮ ರದ್ದಾಗಿರಬಹುದೆಂದು ಭಾವಿಸಲಾಗಿತ್ತು. ಆದರೆ, ಬುಧವಾರ ನಿಗದಿಯಂತೆ ಕಾರ್ಯಕ್ರಮ ಆರಂಭವಾಗಿದ್ದು, ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಏಕಾತ್ಮ ಮಾನವ ದರ್ಶನ ಸಮ್ಮೇಳನದ ಪ್ರದರ್ಶಿನಿಯನ್ನು ಉದ್ಘಾಟಿಸಿದರು.





