ನಂಜನಗೂಡು : ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿರುವ ತಾಲ್ಲೂಕಿನ ಕಪಿಲಾ ನದಿಯ ತಗ್ಗು ಪ್ರದೇಶಗಳಿಗೆ ಶಾಶ್ವತ ಪರಿಹಾರ ರೂಪಿಸುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ಜನತೆಯ ಅಹವಾಲು ಸ್ವೀಕರಿಸಿ ಅವರು ʻಆಂದೋಲನʼ ದೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ್ಗೆ ಕಪಿಲಾ ಪ್ರವಾಹಕ್ಕೆ ಸಿಲುಕುವ ಗ್ರಾಮಗಳ ಸಂಪೂರ್ಣ ಮಾಹಿತಿಯನ್ನು ತರಿಸಿಕೊಂಡಿದ್ದು, ಅದಕ್ಕೊಂದು ಶಾಶ್ವತ ಪರಿಹಾರ ರೂಪಿಸುವ ಯೋಜನೆಯನ್ನು ಈಗಾಗಲೇ ರೂಪಿಸಿದ್ದಾರೆ. ಅದು ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಈಗಾಗಲೇ ತಾಲ್ಲೂಕು ಆಡಳಿತದಿಂದ ಆಯಾ ಗ್ರಾಮಗಳಿಗೆ ಬದಲಿ ನಿವೇಶನ ಗುರುತಿಸುವ ಕಾರ್ಯವೂ ಸಾಗಿದೆ ಎಂದು ಹೇಳಿದರು.
ಈವರೆಗೆ ಪ್ರವಾಹದ ಯಾವುದೇ ಸುಳಿವಿಲ್ಲ. ಕಪಿಲಾ ಜಲಾಶಯದಿಂದ ಬಿಡಬಹುದಾದ ನೀರಿನ ಪ್ರಮಾಣದ ಮೇಲೆಯೇ ನಮ್ಮ ತಾಲ್ಲೂಕಿನ ಪ್ರವಾಹ ಭೀತಿಯ ಆಳ-ಅಗಲ ತಿಳಿಯುವುದರಿಂದ ಹಿಂದಿನ ಪ್ರವಾಹದ ಆಧಾರದ ಮೇಲೆ ನಾವು ತಾಲ್ಲೂಕಿನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.
ತಹಸಿಲ್ದಾರ್ ಶಿವಕುಮಾರ್ ಕ್ಯಾಸನೂರು, ತಾ.ಪಂ ಇಒ ಜೆರಾಲ್ಡ್ ರಾಜೇಶ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ ರಾಜು, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾರುತಿ ಮತ್ತಿತರರು ಹಾಜರಿದ್ದರು.
ವಸತಿ ಶಾಲೆ ಸಮಸ್ಯೆ; ಮಂಗಳವಾರ ಸಭೆ
ಕಸ್ತೂರ್ಬಾ ವಸತಿ ಶಾಲೆಯ ವಾರ್ಡನ್, ಅಕೌಂಟೆಂಟ್ ಬದಲಾವಣೆ ಸೇರಿದಂತೆ ಶಿಕ್ಷಕರೇ ಈಗ ವಾರ್ಡನ್ ಆಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಹಾಗೂ ಅಧಿಕಾರಿಗಳ ಎಡವಟ್ಟನ್ನು ನಾನು ‘ಆಂದೋಲನ’ ದಿನಪತ್ರಿಕೆಯ ಮೂಲಕ ತಿಳಿದುಕೊಂಡಿದ್ದು, ಅಲ್ಲಿನ ಸಮಸ್ಯೆ ಕುರಿತಂತೆ ಮಂಗಳವಾರ ಸಭೆ ನಡೆಸಿ ಚರ್ಚಿಸಿ ಪರಿಹಾರ ರೂಪಿಸಲಾಗುವುದು ಎಂದು ಶಾಸಕರು ತಿಳಿಸಿದರು.





