Mysore
20
overcast clouds
Light
Dark

ಎಡಗೈಗೆ ಸಿರಂಜ್ ಚುಚ್ಚಿದ ಸ್ಥಿತಿಯಲ್ಲಿ‌ ಮೃತದೇಹ ಪತ್ತೆ; ವೈದ್ಯನ ಸಾವಿನ ಸುತ್ತ ಅನುಮಾನದ ಹುತ್ತ

ಕುಶಾಲನಗರ: ಪಿರಿಯಾಪಟ್ಟಣದ ಸರ್ಕಾರಿ ಆಯುರ್ವೇದಿಕ್ ಚಿಕಿತ್ಸಾಲಯ ವೈದ್ಯಾಧಿಕಾರಿ ಮೃತದೇಹ ಕಾರಿನಲ್ಲಿ ಶಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಕುಶಾಲನಗರ ಸಮೀಪದ ಆನೆಕಾಡಿನಲ್ಲಿ ನಡೆದಿದೆ.
ಮೂಲತಃ ಮಂಡ್ಯ ಪಾಂಡವಪುರದ ದಿ.ಗಿರಿಗೌಡ ಎಂಬವರ ಪುತ್ರ ಡಾ.ಸತೀಶ್ (48) ಮೃತ ದುರ್ದೈವಿ.

ಕಳೆದ ಒಂದು ವರ್ಷದಿಂದ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಸಮೀಪದ ಕೊಣಸೂರು ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಶುಕ್ರವಾರ ಕೂಡ ಕೊಣಸೂರು ಆಸ್ಪತ್ರೆಗೆ ಆಗಮಿಸಿದ್ದು ಅಲ್ಲಿಂದ ಪಿರಿಯಾಪಟ್ಟಣಕ್ಕೆ ಆಗಮಿಸಿದ್ದಾರೆ.

ಅಲ್ಲಿಂದ ಮಡಿಕೇರಿಯತ್ತ ತಮ್ಮ‌ ಕಾರಿನಲ್ಲಿ‌ ಆಗಮಿಸಿರುವ ವೈದ್ಯರ‌ ಮೃತದೇಹ ಕಾರಿನಲ್ಲಿ ಕಂಡುಬಂದಿದೆ. ಎಡಗೈಗೆ ಸಿರಂಜ್ ಚುಚ್ಚಿದ ಸ್ಥಿತಿಯಲ್ಲಿ‌ ಮೃತದೇಹ ಪತ್ತೆಯಾಗಿದ್ದು ವಿಷ ತೆಗೆದುಕೊಂಡಿರುವ ಶಂಕೆ‌ ವ್ಯಕ್ತಗೊಂಡಿದೆ.
ಹೆದ್ದಾರಿಯ ಒಂದು‌ ಭಾಗದಲ್ಲಿ ಮಾರುತಿ ಸೆಲೆರಿಯೋ ಕಾರು‌ ನಿಲುಗಡೆ ಸ್ಥಿತಿಯಲ್ಲಿ ತುಂಬಾ ಹೊತ್ತಿನಿಂದ ನಿಂತಿರುವುದು ಕಂಡ ಸ್ಥಳೀಯರು ಪರಿಶೀಲಿಸಿದ ಸಂದರ್ಭ ಚಾಲನೆ ಸೀಟ್ ನಲ್ಲಿ‌ ವೈದ್ಯರು‌ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಸ್ಥಳಕ್ಕೆ‌ ಕುಶಾಲನಗರ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ವಿಧಿವಿಜ್ಞಾನ ಪ್ರಯೋಗಾಲದವರು ಆಗಮಿಸಿ ಪರಿಶೀಲನೆ‌ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಮೃತರ ಪತ್ನಿ‌ ಕುಸುಮ ಕೂಡ ವೈದ್ಯರಾಗಿದ್ದು ಮಂಡ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಿರಿಯಾಪಟ್ಟಣ ಆಸ್ಪತ್ರೆ ಸಹಾಯಕ ಸಿಬ್ಬಂದಿಯ ಹೇಳಿಕೆ ಪ್ರಕಾರ, ಸ್ನೇಹಜೀವಿಯಾಗಿದ್ದ ವೈದ್ಯರು ಎಂದಿನಂತೆ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಂದರ್ಭ ಕೊಂಚ ಬಳಲಿದಂತೆ ಕಂಡು ಬಂದಿದ್ದಾರೆ. ಒಂದು ಬಾರಿ ವಾಂತಿ‌ ಕೂಡ ಮಾಡಿಕೊಂಡು ಬಳಿಕ ಕಾರಿನಲ್ಲಿ ವಿಶ್ರಮಿಸುವುದಾಗಿ ಹೇಳಿ ತೆರಳಿದ್ದಾರೆ. ಮಡಿಕೇರಿ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲದ ವೈದ್ಯರು ಇತ್ತ ಯಾಕೆ‌ ಬಂದರು ತಿಳಿದಿಲ್ಲ‌ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ