ಮೈಸೂರು : ರೈತರ ಜಮೀನಿನಲ್ಲಿ ಹಾದು ಹೋಗುವ ಹೈಟೆನ್ಷನ್ ವಿದ್ಯುತ್ ತಂತಿ ಅಳವಡಿಕೆ ಸಂಬಂಧ ಉಂಟಾಗಿರುವ ಸಮಸ್ಯೆಗೆ ಪರಿಹಾರ ಹುಡುಕಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ರೈತ ಪ್ರಮುಖರ ಸಭೆ ನಡೆಸಿ ಮಾತನಾಡಿದರು.
ರೈತರು ಹೇಳಿರುವ ಎಲ್ಲಾ ಸಮಸ್ಯೆಗಳು, ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು. ಪರ್ಯಾಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ರೈತ ಮುಖಂಡ ಮಂಜು ಕಿರಣ್ ಮಾತನಾಡಿ, ಅವೈಜ್ಞಾನಿಕವಾಗಿ ಹೈಟೆನ್ಷನ್ ವೈರ್ ಅಳವಡಿಸಲು ರೈತರ ವಿರೋಧವಿದೆ. ರೈತರಿಗೆ ಯೋಜನೆಯ ನೀಲನಕ್ಷೆ ಕೊಡಬೇಕು. ಯೋಜನೆಯ ಪ್ರಕಾರ ಎಷ್ಟು ಕಿ.ಮೀ ವಿದ್ಯುತ್ ತಂತಿ ಹಾದು ಹೋಗುತ್ತದೆ. ಯಾವ ರೈತರ ಭೂಮಿಯಲ್ಲಿ ಕಂಬವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ತಂತಿ ಹಾದು ಹೋಗುವ ರೈತರಿಗೆ ಮತ್ತು ಈ ಯೋಜನೆಯ ನಿರ್ವಹಣೆಗಾಗಿ ಗುರುತು ಮಾಡುವ ಭೂಮಿಯ ರೈತರಿಗೆ ಅಧಿಕೃತವಾದ ಪತ್ರದ ಮೂಲಕ ಸೂಚನೆ ಕೊಡಲಾಗಿದೆಯೇ ಎಂದು ಪ್ರಶ್ನಿಸಿದರು.
ಗ್ರಾಮವಾರು ಸಭೆಗಳನ್ನು ಕರೆದು ರೈತರೊಂದಿಗೆ ಚರ್ಚಿಸಿಲ್ಲ. ರೈತರ ಗಮನಕ್ಕೆ ತಾರದೇ ಏಕಾಏಕೀ ಹೈಟೆನ್ಷನ್ ಮಾರ್ಗ ಅಳವಡಿಸಲು ಅವಕಾಶ ಕೊಡಲ್ಲ ಎಂದರು. ಅದೇ ರೀತಿ ಅನೇಕ ರೈತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಎಲ್ಲರ ಅಭಿಪ್ರಾಯ ಆಲಿಸಿದ ಜಿಲ್ಲಾಧಿಕಾರಿ, ನಾವೆಲ್ಲರೂ ರೈತರ ಮಕ್ಕಳೇ ಆಗಿದ್ದೇವೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಕರ್ತವ್ಯ. ಪರ್ಯಾಯ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಮೈಸೂರು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಡಾ.ಎಂ.ಎಲ್.ಶೇಖರ್, ರೈತ ಮುಖಂಡರಾದ ಸಿಂಧುವಳ್ಳಿ ಜಬ್ಬಾರ್, ನಾಗೇಂದ್ರ, ಸಿದ್ದರಾಮ, ಕರಿಯಪ್ಪ, ಅನಿಲ್, ಭೈರೇಗೌಡ, ಚಂದ್ರು, ಶಿವರಾಜು, ಗಿರೀಶ್, ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.





