ಮೈಸೂರು : ಜಿಲ್ಲೆಯಲ್ಲಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು, ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹೆಚ್ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ವೀರನ ಹೊಸಹಳ್ಳಿ ವಲಯದ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಹಿಂಡು ದಾಳಿ ಮಾಡಿದ್ದರಿಂದ ಸುರೇಶ್ ಎಂಬುವವರ ಎರಡು ಎಕರೆ ಬಾಳೆ, ರೈತ ಸಿದ್ದನಾಯಕ ಎಂಬುವವರ ಒಂದು ಎಕರೆ ಕಬ್ಬು ನಾಶವಾಗಿದೆ. ಸ್ಥಳಕ್ಕೆ ಬಾರದ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಲಿ ಹಾಗೂ ಆನೆಯ ದಾಳಿಗೆ ಜನ ಜಾನುವಾರು ಸಾವನ್ನಪ್ಪಿತ್ತಿವೆ. ಜೊತೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ. ಅರಣ್ಯ ಇಲಾಖೆ ಸೂಕ್ತ ಕಾವಲುಗಾರರನ್ನು ನೇಮಿಸುತ್ತಿಲ್ಲ. ಕಾವಲುಗಾರರು ಇರದ ಕಾರಣ ಈ ರೀತಿಯಾಗುತ್ತಿದೆ. ಸುಮಾರು 3 ಲಕ್ಷ ರೂ ಖರ್ಚು ಮಾಡಿ ಬೆಳೆ ಬೆಳೆದಿದ್ದು, ಆನೆಗಳ ದಾಳಿಯಿಂದ ಸಂಪೂರ್ಣ ಹಾನಿ ಆಗಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಉಪಟಳವನ್ನು ಶಾಶ್ವತವಾಗಿ ತಪ್ಪಿಸಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.





