ಮೈಸೂರು : ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು, ಸಹಜ ಸಮೃದ್ಧ ಸಂಸ್ಥೆಯು ದೇಸಿರಿ ಜೊತೆಗೂಡಿ ಜ.9 ರಿಂದ 11ರವರೆಗೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ದೇಸಿ ಎಣ್ಣೆ ಮೇಳ’ ವನ್ನು ಆಯೋಜಿಸಿದೆ.
ಮೂರು ದಿನಗಳ ಕಾಲ ನಡೆಯಲಿರುವ ಎಣ್ಣೆ ಮೇಳದಲ್ಲಿ 50ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುವ ಹಾಗೂ ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆ, 50ಕ್ಕೂ ಹೆಚ್ಚು ವಿವಿಧ ಬಗೆಯ ಎಣ್ಣೆಗಳನ್ನು ಪ್ರದರ್ಶನಕ್ಕೆ ಇಡಲಾಗುವುದು.
ವಿಜ್ಞಾನಿಗಳು, ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ಬಗೆಯನ್ನು ಹೇಳಿಕೊಡಲಿದ್ದಾರೆ. ಆಯುರ್ವೇದ ತಜ್ಞ ವೈದ್ಯರು ಉಚಿತ ಸಲಹೆ ಮತ್ತು ಆರೋಗ್ಯಕ್ಕೂ ಎಣ್ಣೆಗಳಿಗೂ ಇರುವ ಸಂಬಂಧದ ಮಾಹಿತಿ ನೀಡಲಿದ್ದಾರೆ. ಜ.9ರಂದು ಸಂಜೆ 6ಗಂಟೆಗೆ ಡಾ.ಖಾದರ್ ವಲಿ ಅವರಿಂದ ಉಪನ್ಯಾಸ, ಜ.10ರಂದು ಬೆಳಿಗ್ಗೆ 11ಕ್ಕೆ ಎಣ್ಣೆಕಾಳು ಕೃಷಿ ಮತ್ತು ಮೌಲ್ಯವರ್ಧನೆಯ ರೈತ ತರಬೇತಿ ಕಾರ್ಯಕ್ರಮ, ಜ.11ರಂದು ಬೆಳಿಗ್ಗೆ 11.30ಕ್ಕೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ ಹೋಮಿಯೋಪತಿ, ಅಲೋಪತಿ, ಆಯುರ್ವೇದ, ಯುನಾನಿ ಮತ್ತು ಪೌಷ್ಟಿಕತೆ ತಜ್ಞ ವೈದ್ಯರೊಂದಿಗೆ ಸಂವಾದ ನಡೆಯಲಿದೆ.
ಮೇಳದಲ್ಲಿ 50 ಗುಡಿ ಕೈಗಾರಿಕೆ ಉದ್ಯಮಗಳ ಮಾರಾಟ ಮಳಿಗೆಗಳು ಇರುತ್ತವೆ ಜತೆಗೆ ವೈವಿಧ್ಯಮಯ ಆಹಾರ ಖಾದ್ಯಗಳನ್ನು ಸವಿಯಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. 9535149520 ಅನ್ನು ಸಂಪರ್ಕಿಸಬಹುದು.





