ಮೈಸೂರು: ಮೈಸೂರು ತಾಲೂಕು ವರುಣಾ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿರುವ ದಂಡಿಮಾರಮ್ಮ ದೇವಾಲಯವನ್ನು ಸಿಎಂ ಸಿದ್ದರಾಮಯ್ಯ ಅವರಿಂದು ಉದ್ಘಾಟಿಸಿದರು.
ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ತಿಮ್ಮಯ್ಯ, ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಹಲವರು ಸಾಥ್ ನೀಡಿದರು.
ಬಳಿಕ ಜ್ಯೋತಿ ಬೆಳಗಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು, ಸಂತೋಷದಿಂದ ದಂಡಿ ಮಾರಮ್ಮ ದೇವಸ್ಥಾನವನ್ನು ಉದ್ಘಾಟನೆ ಮಾಡಿದ್ದೇನೆ. ಕಾರ್ಯಕ್ರಮಕ್ಕೆ ಬರಲೇಬೇಕು ಅಂತ ಪಿಲ್ಲಹಳ್ಳಿ ಗ್ರಾಮದವರು ಒತ್ತಾಯ ಮಾಡಿದ್ರು. ದೇವರು ಕೇವಲ ದೇವಸ್ಥಾನ ಒಳಗೆ ಇರುತ್ತಾನೆ ಎನ್ನುವುದು ಎಲ್ಲರ ನಂಬಿಕೆ. ಆ ನಂಬಿಕೆಗೆ ನನ್ನ ವಿರೋಧವಿಲ್ಲ. ದೇವರು ಎಲ್ಲಾ ಕಡೆ ಇದ್ದಾನೆ ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. ನಾನು ಚುನವಣೆಗೆ ನಿಂತ ಸಮಯದಲ್ಲಿ ನನ್ನನ್ನು 83 ರಿಂದ ಗೆಲ್ಲಿಸಿಕೊಂಡು ಬಂದ್ರಿ. ಮೈಸೂರು ತಾಲ್ಲೂಕಿನ ಜನರ ಋಣವನ್ನು ಎಂದು ಕೂಡ ಮರೆಯುವುದಿಲ್ಲ. ನೀವು ಗೆಲ್ಲಿಸಿದ ಕಾರಣದಿಂದ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವಾಯಿತು. ಕೇವಲ ನನ್ನ ವ್ಯಕ್ತಿತ್ವ ಇದ್ದರೆ ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಜನರ ಅರ್ಶಿವಾದ ಇರಬೇಕು. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರಿಗೆ ನಾನು ಯಾವಾಗಲೂ ಕೃತಜ್ಞತೆಯ ಭಾವದಿಂದ ಇರುತ್ತೇನೆ. ಪಿಲ್ಲಹಳ್ಳಿ ಗ್ರಾಮದ ಜನ ನನ್ನನ್ನು ಯಾವತ್ತು ಕೈ ಬಿಟ್ಟಿಲ್ಲ. ನಿಮ್ಮ ಸಂಬಂಧ ನನ್ನನ್ನು ಇವತ್ತು ದೇವಸ್ಥಾನದ ಉದ್ಘಾಟನೆಗೆ ಬರುವುದಕ್ಕೆ ಕಾರಣವಾಗಿದೆ. ನಾನು ವೋಟು ಕೇಳಲು ಬರದೇ ಇದ್ರು ನೀವು ನನಗೆ ವೋಟು ಹಾಕುತ್ತೀರ. ದಂಡಿನಮಾರಮ್ಮ ದೇವಸ್ಥಾನ ನಮ್ಮ ಊರಿನಲ್ಲೂ ಇದೆ. ನಾನು ಚಿಕ್ಕವನಿಂದಾಗ ತಂಬಿಟ್ಟು ಅರತಿ ತೆಗೆದುಕೊಂಡು ಹೋಗುತ್ತಿದ್ದೇವು ಎಂದು ಬಾಲ್ಯದ ನೆನಪನ್ನು ಮೆಲುಕು ಹಾಕಿದರು.





