Mysore
33
few clouds

Social Media

ಭಾನುವಾರ, 08 ಮಾರ್ಚ್ 2026
Light
Dark

ಕೇಂದ್ರದ ಸಾಲದ ನೀತಿ ಟೀಕಿಸಿದ ಸಿಎಂ ಸಿದ್ದರಾಮಯ್ಯ.

ಮೈಸೂರು: ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯಲ್ಲೇ ದಾಖಲೆಯ 17ನೇ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

​ಮೈಸೂರು ತಾಲ್ಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಲ್ಲುವ ಮುನ್ನ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದರು. ಕರ್ನಾಟಕದ ಸಾಲದ ಪ್ರಮಾಣವು ನಿಗದಿತ ಶೇಕಡಾ 25ರ ಮಿತಿಯೊಳಗೇ ಅಂದರೆ ಶೇಕಡಾ 24.94ರಷ್ಟಿದೆ. ಆದರೆ ಕೇಂದ್ರ ಸರ್ಕಾರದ ಸಾಲದ ಪ್ರಮಾಣವು ಶೇಕಡಾ 55.6ಕ್ಕೆ ಏರಿಕೆಯಾಗಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ದೂರಿದರು.

​ಕಳೆದ 11 ವರ್ಷಗಳಲ್ಲಿ ಕೇಂದ್ರದ ಸಾಲ 53 ಲಕ್ಷ ಕೋಟಿಯಿಂದ 218 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಅಂಕಿ ಅಂಶ ನೀಡಿದ ಮುಖ್ಯಮಂತ್ರಿಗಳು, ಜಿಎಸ್‌ಟಿ ತಿದ್ದುಪಡಿಯಿಂದ ರಾಜ್ಯಕ್ಕೆ ವಾರ್ಷಿಕ ಸುಮಾರು 10,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಎಲ್ಲಾ ಹಿನ್ನಡೆಯ ನಡುವೆಯೂ ಜನಸಾಮಾನ್ಯರ ಮೇಲೆ ಹೊಸ ತೆರಿಗೆ ಹೇರದೆ, ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.

ನಮ್ಮದು ಒಂದು ವರ್ಗಕ್ಕೆ ಸೀಮಿತವಾದ ಬಜೆಟ್ ಅಲ್ಲ, ಸಾಮಾಜಿಕ ನ್ಯಾಯದಡಿ ಸಮಾನ ಅವಕಾಶ ಒದಗಿಸುವ ಕೆಲಸ ಮಾಡಿದ್ದೇವೆ, ಯಾವುದೇ ಒಂದು ವರ್ಗ ಅಥವಾ ಕೆಲವೇ ವರ್ಗಕ್ಕೆ ಬಜೆಟ್ ಮಂಡಿಸಿಲ್ಲ ಬದಲಾಗಿ ಎಲ್ಲಾ ವರ್ಗಕ್ಕೂ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.

​ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಮುಂದಿನ ದಿನಗಳಲ್ಲಿ ಇನ್ನೂ ಎರಡು ಬಜೆಟ್ ಮಂಡಿಸಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ವಿಧಾನಪರಿಷತ್ ಸದಸ್ಯರಾದ ಡಾ ಡಿ ತಿಮ್ಮಯ್ಯ, ಡಾ ಕೆ ಶಿವಕುಮಾರ್, ಡಾ ಯತಿಂದ್ರ ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Tags:
error: Content is protected !!