ಮೈಸೂರು : ಮೋಸದಿಂದ ಕಾರುಗಳನ್ನು ಖರೀದಿಸಿ, ಯಾವುದೇ ದಾಖಲೆ ನೀಡದೆ ಕಡಿಮೆ ಹಣ ಪಡೆದು ಬೇರೆಯವರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ ವಂಚಕರ ತಂಡವನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನಗರದ ಗೌಸಿಯಾನಗರ ನಿವಾಸಿ ಹಾಗೂ ಹಣ್ಣಿನ ವ್ಯಾಪಾರಿ ರುಮಾನ್ ಷರೀಪ್, ರಾಜೀವ್ನಗರ ನಿವಾಸಿ ಹಾಗೂ ಕಾರಿನ ಡೀಲರ್ ಮುಜಾಹಿದ್ ಪಾಷ ಹಾಗೂ ಲಷ್ಕರ್ ಮೊಹಲ್ಲಾ ನಿವಾಸಿ ಹಾಗೂ ಕಾರ್ ಮ್ಯಾಕಾನಿಕ್ ಷಾಹಬುದ್ದೀನ್ ಬಂಧಿತರು. ಬಂಧಿತರಿಂದ 1,10 ಕೋಟಿ ರೂ.ಮೌಲ್ಯದ 8 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು, “ಕಡಿಮೆ ಬೆಲೆಗೆ ಉತ್ತಮ ಕಾರುಗಳು ದೊರೆಯುತ್ತವೆ” ಎಂದು ನಂಬಿಸುತ್ತಿದ್ದರು. ನಂತರ ಮುಜಾಹಿದ್ ಪಾಷಾ ಮತ್ತು ಷಾಹಬುದ್ದೀನ್ ಜೊತೆ ಸೇರಿ, ಖರೀದಿದಾರರಿಗೆ ಪೋಲೊ ಮತ್ತು ಆಡಿ ಕಂಪನಿಯ ಕಾರುಗಳನ್ನು ನೀಡಿ ಹಣ ಪಡೆಯುತ್ತಿದ್ದರು. ಆದರೆ ಕಾರಿಗೆ ಸಂಬಂಧಿಸಿದ ಆರ್ಸಿ, ಇನ್ಸೂರನ್ಸ್ ಅಥವಾ ಯಾವುದೇ ದಾಖಲೆಗಳನ್ನು ನೀಡುತ್ತಿರಲಿಲ್ಲ.
ಪ್ರಕರಣವೊಂದರಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾದ ಬಳಿಕ, ತನಿಖೆ ಆರಂಭಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೆಂಗಳೂರು ಮತ್ತು ಅನ್ಯ ರಾಜ್ಯಗಳಿಂದ ಕಾರುಗಳನ್ನು ತಂದು ಮೈಸೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ಜಾಲದಲ್ಲಿ ಹಲವು ಮಂದಿ ವಂಚನೆಗೆ ಒಳಗಾಗಿದ್ದಾರೆ ಪೊಲೀಸರು ಶಂಕಿಸಿದ್ದಾರೆ.
ಅಪರ ಪೊಲೀಸ್ ಅಧಿಕ್ಷಕ ಎಲ್.ನಾಗೇಶ್ ನೇತೃತ್ವದಲ್ಲಿ ಡಿಎಸ್ಪಿ ಜಿ.ಎಸ್.ರಘು, ಬನ್ನೂರು ಪೊಲೀಸ್ ಠಾಣೆಯ ಪಿಐ.ಸತೀಶ್, ಪಿಎಸ್ಐ.ಸುದರ್ಶನ್, ಎಎಸ್ಐ.ಸತೀಶ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.





