ಮೈಸೂರು: ಕೇಂದ್ರ ಸರ್ಕಾರ ಎಲ್ಪಿಜಿ ಗ್ಯಾಸ್ ಬೆಲೆಯನ್ನು 5 ರೂ.ಗೆ ಏರಿಕೆ ಮಾಡಿದ್ದರೂ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬೆಲೆ ಕಡಿಮೆಯಾಗಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಗ್ಯಾಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಇಂದು(ಏಪ್ರಿಲ್.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ 2023ರ ಆಗಸ್ಟ್ನಲ್ಲಿ ಪ್ರತಿ ಸಿಲಿಂಡರ್ ಬೆಲೆ 1,110 ರೂ. ಮಾಡಿತ್ತು. ಅದನ್ನು ಸೆಪ್ಟೆಂಬರ್ ತಿಂಗಳಿನಲ್ಲಿ 200 ರೂ.ಕಡಿಮೆ ಮಾಡಿದ್ದರು. 2024ರ ಏಪ್ರಿಲ್ನಲ್ಲಿ ಮತ್ತೊಮ್ಮೆ 100 ರೂ. ಕಡಿಮೆ ಮಾಡಿದ್ದರು. ಆದರೆ ಇದೀಗ 50 ರೂ. ಏರಿಕೆ ಮಾಡಿದ್ದರೂ 850 ಇದೆ. ಪುಣ್ಯಾತ್ಮ ಮೋದಿ ಅವರು 300 ರೂ. ಕಡಿಮೆ ಮಾಡಿ 50 ರೂ. ಏರಿಕೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು.
ಕೇಂದ್ರ ಸರ್ಕಾರ ಗ್ಯಾಸ್, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುವ ಮೊದಲೇ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಮೇಲೆ ದರ ಏರಿಕೆ ಮಾಡಿದ್ದಾರೆ. ಈಗ ಕೇಂದ್ರದ ದರ ಏರಿಕೆಯನ್ನೇ ತಮ್ಮ ದರ ಏರಿಕೆ ನಿರ್ಧಾರಕ್ಕೂ ಸಮರ್ಥಿಸಿಕೊಳ್ಳಬಾರದು ಎಂದರು.
ಇನ್ನೂ ಕೇಂದ್ರ ಸರ್ಕಾರದಿಂದ ನಿಜವಾಗಿಯೂ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ತೆರಿಗೆ ಹಂಚಿಕೆಯಲ್ಲಿ ಸರಿಯಾದ ಅನುದಾನವನ್ನೇ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರು ತಾವೇ ದರ ಏರಿಕೆ ಕೇಂದ್ರ ಸರ್ಕಾರವನ್ನು ಆರೋಪಿಸುತ್ತಿದ್ದಾರೆ. ಅವರು ನಾನು ತಿನ್ನುತ್ತೇನೆ, ನೀವೂ ತಿನ್ನಿ. ಆದರೆ ಯಾರೂ ಮಾತನಾಡಬೇಡಿ ಎಂಬ ಸಿದ್ಧಾಂತವನ್ನು ಹೊಂದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಅನುದಾನ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದಾರೋ ಇಲ್ಲವೋ ಎಂಬುದು ಮೊದಲು ತಿಳಿಯಬೇಕು. ಅದಕ್ಕೆ ನೀವೂ ಮೊದಲು ರಾಜ್ಯದ ಜನತೆಗೆ ಉತ್ತರ ನೀಡಿ ಎಂದು ತಿರುಗೇಟು ನೀಡಿದರು.





