Mysore
23
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮೈಸೂರು ಮುಕುಟಕ್ಕೆ ಮತ್ತೊಂದು ಗರಿ: 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ

ಮೈಸೂರು: ಸಾಂಸ್ಕೃತಿಕ ನಗರಿ, ಅರಮನೆ ನಗರಿ ಹೆಗ್ಗಳಿಕೆಯ ಮೈಸೂರು ಶೀಘ್ರದಲ್ಲಿಯೇ ” ಗಾಂಧಿ ಭವನ” ಎಂಬ ಗರಿಯನ್ನು ತನ್ನ ಮುಕುಟಕ್ಕೆ ಸಿಕ್ಕಿಸಿಕೊಳ್ಳಲಿದೆ.

ಮಹಾತ್ಮ ಗಾಂಧಿಯವರ ಚಿಂತನೆಗಳು, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳೊಂದಿಗೆ, ಗಾಂಧಿಯವರ ಸರಳ ಜೀವನ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು ಮಹಿಳೆಯರು, ದಲಿತ, ಹಿಂದುಳಿದವರ ಬಗೆಗೆ ಅವರಿಗಿದ್ದ ಕಾಳಜಿ, ತುಡಿತಗಳ ಅನಾವರಣ ಗಾಂಧಿ ಭವನದಲ್ಲಿ ಆಗಲಿದೆ.

ನಗರದ ಬನ್ನೂರು ರಸ್ತೆಯ ಹೊಸ ಜಿಲ್ಲಾಧಿಕಾರಿ ಕಛೇರಿ ಪಕ್ಕದಲ್ಲಿ ಸದ್ದಿಲ್ಲದೇ ನಿರ್ಮಾಣ ವಾಗುತ್ತಿರುವ ಗಾಂಧಿಭವನದ ಶೇ 70 ರಷ್ಟು ಕಾಮಗಾರಿ ಪೂರ್ಣಗೊಂಡು, ಮುಂದಿನ ಮೂರ್ನಾಕು ತಿಂಗಳಲ್ಲಿ ಉದ್ಘಾಟನೆಗೆ ಸಿದ್ದಗೊಳ್ಳಲಿದೆ.

ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಅಂದರೆ 2016- 17 ರ ಆಯವ್ಯದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ , ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಇಲಾಖೆಯ ಮಖಾಂತರ ರೂ.3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವನ್ನ ಘೋಷಿಸಿದ್ದರು.

ಗಾಂಧಿ ಭವನದಲ್ಲಿ ವರ್ಷಪೂರ್ತಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲು ಉದ್ದೇಶಿಸಲಾಗಿರುತ್ತದೆ. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಿ ಗಾಂಧೀಜಿಯವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.

ಅದರಂತೆ ಮೈಸೂರು ಜಿಲ್ಲೆಯಲ್ಲಿಯೂ 1 ಎಕರೆ ವಿಶಾಲವಾದ ಪ್ರದೇಶದಲ್ಲಿ ಗಾಂಧಿಭವನ ತಲೆಎತ್ತುತಿದ್ದು 100*100 ಅಳತೆಯ ಭವ್ಯ ಕಟ್ಟಡ ನಿರ್ಮಾಣವಾಗುತ್ತಿದೆ ಕಟ್ಟಡದಲ್ಲಿ ಗ್ರಂಥಾಲಯ, ವಾಚನಾಲಯ,ವಿವಿದೋದ್ದೇಶ ಸಭಾಂಗಣ, ತರಬೇತಿ ಕೇಂದ್ರ ಗಾಂಧಿಯವರ ಜೀವನದ ವಿವಿಧ ಹಂತಗಳ ಪೋಟೋ ಗ್ಯಾಲರಿ, 100 ಜನ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಛೇರಿ ಕೋಣೆ ಸೇರಿದಂತೆ, ಕಟ್ಟಡದ ಹಿಂಭಾಗದಲ್ಲಿ ಶೌಚಾಲಯ, ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ಇರಲಿದೆ.

ಕಟ್ಟಡದ ಮುಂಭಾಗದ ಅಂಗಳದಲ್ಲಿ ಹುಲ್ಲುಹಾಸಿನ ನಡುವೆ ಗಾಂಧಿಯವರ ವಿವಿಧ ಕಲಾಕೃತಿಗಳು, ಸ್ವಾತಂತ್ರ್ಯ ಸಂಗ್ರಾಮದ ಪೋಟೋಗಳು, ದೆಹಲಿಯ ಪಾರ್ಲಿಮೆಂಟ್ ಮುಂಭಾಗದಲ್ಲಿರುವ ಗ್ಯಾರಾ ಮೂರ್ತಿ ಆಕೃತಿ ತಲೆ ಎತ್ತಲಿದೆ.

ಜಿಲ್ಲಾಮಟ್ಟದಲ್ಲಿ ಗಾಂಧಿ ಭವನ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಮಟ್ಟದ ಸಮಿತಿಯಿದ್ದು, ಜಿಲ್ಲಾ ಪಂಚಾಯತ್ ಸಿಇಒ, ಪೊಲೀಸ್ ವರಿಷ್ಠಾಧಿಕಾರಿಗಳು ಸದಸ್ಯರಿದ್ದು ಜಿಲ್ಲಾ ವಾರ್ತಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಒಟ್ಟಾರೆಯಾಗಿ ಗಾಂಧಿ ಭವನ ಗಾಂಧಿ ಪ್ರಿಯರು, ಗಾಂಧಿವಾದಿಗಳು, ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರು ಗಾಂಧಿಯವರನ್ನ ಅರಿಯುವ ಹಾಗೂ ಪಿಕ್ನಿಕ್ ಪ್ರಿಯರಿಗೆ ಒಂದರ್ಧದಿನ ಕಳೆಯಲು ಒಂದು ಉತ್ತಮ ತಾಣವಾಗಲಿದೆ.

Tags:
error: Content is protected !!