ಮೈಸೂರು: ಮಹಾನ್ ಮಾನವತಾವಾದಿ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ಅಳವಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ, ಫ್ಲೆಕ್ಸ್ಗಳನ್ನು ವಿರೂಪಗಳಿಸಿ ನೀಲಿ ಧ್ವಜಗಳನ್ನು ಹರಿದು ವಿಕೃತಿ ಮೆರೆದಿರುವ ದುರ್ಘಟನೆ ಜರುಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.
ಏಪ್ರಿಲ್.14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಹಾಗೂ ಗ್ರಾಮದ ಒಳಗಡೆ ಅಳವಡಿಸಿದ್ದ ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ಗಳನ್ನು ಹರಿದು ವಿಕೃತ ಮೆರೆಯಲಾಗಿದ್ದು, ನೀಲಿ ಧ್ವಜಗಳನ್ನು ಹರಿದು ಹಾಕಲಾಗಿದೆ.
ಇದನ್ನೂ ಓದಿ:- ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್: ಕೂದಲೆಳೆ ಅಂತರದಲ್ಲಿ ಪಾರು
ಗ್ರಾಮದ ದಲಿತ ಮುಖಂಡರು ಭಾವಚಿತ್ರ ವಿರೂಪಗೊಳಿಸಿದವರನ್ನು ಬಂಧಿಸುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಅಂಬೇಡ್ಕರ್ ಅವರ ಭಾವಚಿತ್ರ ವಿರೂಪಗೊಳಿಸಿರುವವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.





