ಮೈಸೂರು: ಕಳೆದ ವರ್ಷ ಕಾಡಾನೆ ಸೆರೆಹಿಡಿಯುವ ಕಾರ್ಯಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಆದಷ್ಟು ಬೇಗನೇ ನಿರ್ಮಿಸಿ ಎಂದು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಮಳೆಗಾಲ ಶುರುವಾಗುವ ಮುನ್ನ ಸಮಾಧಿ ನಿರ್ಮಾಣ ಕೆಲಸ ಆರಂಭವಾಗಲಿ ಎನ್ನುವುದು ನನ್ನ ಕೋರಿಕೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಮೇ. ೨ ರಂದು ನಟ ದರ್ಶನ್ ತೂಗುದೀಪ ಅವರು, ʻದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದುʼ ಎಂದು ಎಕ್ಸ್ನಲ್ಲಿ ಬರೆದುಕೊಂಡು ವಿನಂತಿ ಮಾಡಿದ್ದರು.
ಅದರಂತೆ ನಟ ದರ್ಶನ್ ಅವರೇ ಅರ್ಜುನ ಆನೆ ಸಮಾಧಿಗೆ ನೆರವು ನೀಡಿ ಕಲ್ಲುಗಳನ್ನು ಕಳುಹಿಸಿ ತಾತ್ಕಲಿಕ ಹೊದಿಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ದರ್ಶನ್ ಅಭಿಮಾನಿ ಬಳಗದ ಸಾಮಾಜಿಕ ಜಾಲತಾಣದಲ್ಲಿ ಸಮಾಧಿ ಹೊದಿಕೆ ಕಾರ್ಯಚರಣೆಗಳು ನಡೆಯುತ್ತಿರುವ ವಿಡಿಯೋಗಳು ಹೆಚ್ಚೆಚ್ಚು ಶೇರ್ ಆಗುತ್ತಿವೆ. ಕೊಟ್ಟ ಮಾತಿನಂತೆ ಅರ್ಜುನನ ಸ್ಮಾರಕಕ್ಕೆ ನೆರವು ನೀಡಿದ ನಮ್ಮ ಪ್ರೀತಿಯ ಡಿ ಬಾಸ್ ಎನ್ನುವ ಟ್ಯಾಗ್ ಲೈನ್ಗಳನ್ನು ಬರೆದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.





