Mysore
27
clear sky

Social Media

ಗುರುವಾರ, 19 ಮಾರ್ಚ್ 2026
Light
Dark

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ

animals wild conflict

ಹುಣಸೂರು : ಹುಲಿ ದಾಳಿಗೆ ಮೃತಪಟ್ಟ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ 15 ಲಕ್ಷ ರೂ. ಪರಿಹಾರವನ್ನು ಇದೀಗ 20 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಪಿ.ಎ.ಸೀಮಾ ಮಾಹಿತಿ ನೀಡಿದರು.

ನಗರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಚೇರಿ ಆವರಣದಲ್ಲಿ ಬುಧವಾರ ರೈತರೊಂದಿಗೆ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಇಲಾಖೆ ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಹೀಗಿದ್ದೂ ಕೆಲವೊಂದು ಅವಘಡಗಳು ನಮ್ಮೆಲ್ಲರ ಕೈಮೀರಿ ನಡೆಯುತ್ತಿವೆ. ವನ್ಯಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ನೀಡುತ್ತಿದ್ದ15 ಲಕ್ಷ ರೂ. ಪರಿಹಾರವನ್ನು ಮೂರು ತಿಂಗಳ ಹಿಂದೆ 20 ಲಕ್ಷ ರೂ.ಗಳಿಗೆ ಏರಿಸಿದೆ. ರೈತ ಸಮುದಾಯ 25ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದು, ಸರ್ಕಾರ ಈ ಕುರಿತು ನಿರ್ಧರಿಸಲಿದೆ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ವನ್ಯಜೀವಿಗಳಿಂದ ಬೆಳೆ ನಾಶವಾದಲ್ಲಿ ಅದಕ್ಕೆ ಇಲಾಖೆ ಶೀಘ್ರು ಮತ್ತು ನ್ಯಾಯಯುತ ಪರಿಹಾರ ನೀಡಬೇಕು. ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಬೆಳೆ ನಾಶ ಪರಿಹಾರ ಬಾಕಿ ಹಣ ಉಳಿಸಿಕೊಂಡಿದೆ. ಇದನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಆರ್‌ಎಫ್‌ಒ ನಂದಕುಮಾರ್ ಮಾತನಾಡಿ, ಪ್ರಸ್ತುತ ವರ್ಷದ ಏಪ್ರಿಲ್ ತಿಂಗಳವರೆಗೂ ಬೆಳೆ ನಾಶ ಪ್ರಕರಣಗಳ ಪರಿಹಾರ ಹಣವನ್ನು ವಿತರಿಸಲಾಗಿದೆ. ಪರಿಹಾರ ತೆಗೆದುಕೊಳ್ಳದಿರುವವರು ಇದ್ದರೆ ಈ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಡಿಸಿಎಫ್ ಸೀಮಾ ಮಾತನಾಡಿ, ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳು ಮೃತಪಟ್ಟರೆ ೩೦ ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಕಾಡುಹಂದಿ ದಾಳಿಯಿಂದ ಬೆಳೆ ನಾಶವಾದರೂ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋತಿಗಳನ್ನು ಹಿಡಿಯುವವ ಯಾರು?: ಸಭೆಯಲ್ಲಿ ಕೋತಿಗಳ ಹಾವಳಿ ನಿಯಂತ್ರಿಸುವ
ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಅಧಿಕಾರಿಗಳು ಮತ್ತು ರೈತರ ನಡುವೆ ಜಟಾಪಟಿಗೆ ಕಾರಣವಾಯಿತು. ಈ ವೇಳೆ ಹುಣಸೇಗಾಲ ಗೋವಿಂದೇಗೌಡ ಮಾತನಾಡಿ, ನಾಲೈದು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೋತಿಗಳ ಹಾವಳಿಯಿಂದಾಗಿ ಬೆಳೆ ನಷ್ಟವಾಗಿರುವ ಕುರಿತು ಇಲಾಖೆಗೆ ತಿಳಿಸಿದಾಗ ಕೋತಿಗಳನ್ನು ಹಿಡಿಯುವುದು ಗ್ರಾ.ಪಂ. ಜವಾಬ್ದಾರಿಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿತು. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮ ಜವಾಬ್ದಾರಿಯಲ್ಲ ಎಂದು ಕೈಚೆಲ್ಲಿದರು. ೭ ಲಕ್ಷ ರೂ. ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆ. ನನಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದರು.

ರೈತ ಬಸವೇಗೌಡ ಮಾತನಾಡಿ, ನಮ್ಮ ಭಾಗದಲ್ಲೂ ಕೋತಿ ಹಾವಳಿಯಿಂದಾಗಿ ಬೆಳೆ ನಾಶವಾಗುತ್ತಿದೆ ಎಂದು ದೂರಿದರು. ಎಸಿಎಫ್ ಲಕ್ಷ್ಮೀಕಾಂತ್ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರ ಕೋತಿಗಳನ್ನು ಹಿಡಿಯುವ ಕಾರ್ಯ ಗ್ರಾ.ಪಂ.ನದ್ದಾಗಿದ್ದು, ಈ ಕುರಿತು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಮಾಹಿತಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

Tags:
error: Content is protected !!