ತಿ.ನರಸೀಪುರ : ನವೆಂಬರ್ 11ರಂದು ನಡೆಯಲಿರುವ ಕನಕದಾಸ ಜಯಂತಿ ಆಚರಣೆಯ ಕುರಿತು ತಾಲೂಕು ಆಡಳಿತ ಕರೆದಿದ್ದ ಪೂರ್ವಭಾವಿ ಸಭೆಯು ಅಧಿಕಾರಿಗಳ ಗೈರು ಹಾಜರಿಯಿಂದ ರದ್ದಾಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಸಿ.ಜಿ. ಗೀತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಕನಕದಾಸ ಜಯಂತಿ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯು ತಾಲೂಕು ಮಟ್ಟದ ಅಧಿಕಾರಿಗಳ ಬಹುತೇಕ ಗೈರುಹಾಜರಿಯಿಂದ ಮುಂದೂಡಲಾಯಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ ಮಾಜಿ ತಾ. ಪಂ.ಉಪಾಧ್ಯಕ್ಷ ಬಿ. ಮರಯ್ಯ ಪ್ರತಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಭೆ ಮತ್ತು ಇನ್ನಿತರ ತಾಲೂಕು ಮಟ್ಟದ ಸಭೆಗಳಿಗೆ ಅಧಿಕಾರಿಗಳು ನಿರಂತರ ಗೈರುಹಾಜರಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕು ಮಟ್ಟದ ಸಭೆಗಳಿಗೆ ಗೈರಾಗುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಹಾಗಾಗಿ ಈ ಸಭೆಯನ್ನು ಬಹಿಷ್ಕರಿಸುತ್ತೇನೆ ಎಂದು ಸಭೆಯಿಂದ ಹೊರನಡೆದರು.ಸಭೆಯಲ್ಲಿ ಹಾಜರಿದ್ದ ಎಲ್ಲ ಸಮುದಾಯದ ಮುಖಂಡರು ಅವರ ಅಭಿಪ್ರಾಯಕ್ಕೆ ಧ್ವನಿಗೂಡಿಸಿ ಸಭೆ ಬಹಿಷ್ಕರಿಸಿ ಹೊರನಡೆದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ಕೃಷ್ಣ, ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು,ಪುರಸಭಾ ಸದಸ್ಯ ಟಿ.ಎಂ. ನಂಜುಂಡಸ್ವಾಮಿ, ಬಾದಾಮಿ ಮಂಜು,ನಂಜುಂಡಸ್ವಾಮಿ,ಮಾಜಿ ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ,ಕಸಾಪ ತಾಲೂಕು ಅಧ್ಯಕ್ಷ ಕನ್ನಡಪುಟ್ಟಸ್ವಾಮಿ,ಅಮಾಸೆಗೌಡ,ಬಣ್ಣ ಬಸವಣ್ಣ,ಸೋಮುದಾದ,ಅಶ್ವಿನ್ ಕುಮಾರ್ ಇತರರು ಹಾಜರಿದ್ದರು.